ಬೆಂಗಳೂರು: ವಿಧಾನಮಂಡಲದ ವಿವಿಧ ಸಮಿತಿಗಳ ಸಭೆ ತಿಂಗಳಿಗೊಮ್ಮೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿದೆ. ಈ ಕುರಿತು ಸಮಿತಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಈಗಾಗಲೇ ಸುವರ್ಣಸೌಧ ನಿರ್ಮಿಸಲಾಗಿದೆ. ಅಲ್ಲಿ ಅಧಿವೇಶನ ನಡೆಸುವುದರಿಂದ ಆಗುವ ಖರ್ಚು – ವೆಚ್ಚದ ಬಗ್ಗೆ ಈಗ ಮಾತನಾಡುವುದರಿಂದ ಪ್ರಯೋಜನವಿಲ್ಲ. ಆ ಕಟ್ಟಡವನ್ನು ಯಾವ ರೀತಿ ಸದುಪಯೋಗಪಡಿಸಿಕೊಳ್ಳಬಹುದು ಎಂಬ ಬಗ್ಗೆ ಯೋಚಿಸಬೇಕು ಅಷ್ಟೆ. ಒಂದೆರಡು ಇಲಾಖೆಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿದ್ದಾರೆ ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವರ್ಷಕ್ಕೆ 60 ದಿನ ಅಧಿವೇಶನ ನಡೆಯಬೇಕು. 40 ದಿನ ಬೆಂಗಳೂರಿನಲ್ಲಿ ಹಾಗೂ 20 ದಿನ ಬೆಳಗಾವಿಯಲ್ಲಿ ಕಲಾಪ ನಡೆಸುವುದು ಸೂಕ್ತ ಎಂದು ಸಲಹೆ ಮಾಡಲಾಗಿದೆ. ವರ್ಷಕ್ಕೆ ಎರಡು ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸಿದ್ದರಾಮಯ್ಯ ಒಪ್ಪಿದ್ದಾರೆ ಎಂದರು.
ಐದು ವರ್ಷಗಳ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಶಾಸಕರಿಗೆ, ಶಾಸಕರ ದಿನಾಚರಣೆ ಸಂದರ್ಭದಲ್ಲಿ ‘ಉತ್ತಮ ಸಂಸದೀಯ ಪಟು’ ಪ್ರಶಸ್ತಿ ನೀಡಬೇಕು ಎಂಬ ಚಿಂತನೆ ಇದೆ ಎಂದರು.
ತಮ್ಮನ್ನು ಕಾಗದದ ಹುಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾಡಿರುವ ಟೀಕೆ ಕುರಿತು ಕೇಳಿದ ಪ್ರಶ್ನೆಗೆ ‘ಉತ್ತರ ನೀಡುವುದು ನನಗೂ ಗೊತ್ತು. ಆದರೆ, ಸ್ಪೀಕರ್ ಸ್ಥಾನದಲ್ಲಿ ಇರುವುದರಿಂದ ಮಾತನಾಡುವುದು ಸರಿಯಲ್ಲ. ಅವರಿಂದ ಕಲಿಯುವುದು ಏನೂ ಇಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.