ಲಖನಾಪುರ (ನಿಪ್ಪಾಣಿ): ದಲಿತ ವರ್ಗದ ಜನ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉಳಿದವರ ಜೊತೆ ಸಮಾನರಾಗಿ ಬಾಳಬೇಕಾದರೆ ಸುಶಿಕ್ಷಿತರಾಗಿ ಸ್ವಾವಲಂಬಿಗಳಾಗಬೇಕು. ಪುರಾಣದ ವಾಲ್ಮೀಕಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನಾದರ್ಶಗಳು ನಮಗೆ ಮಾದರಿಯಾಗಬೇಕು. ಆ ನಿಟ್ಟಿನಲ್ಲಿ ಸರಕಾರದ ಸವಲತ್ತುಗಳನ್ನು ಸರಿಯಾಗಿ ದಲಿತರಿಗೆ ತಲುಪಿಸುವ ಕಾರ್ಯ ಪ್ರಾಮಾಣಿಕವಾಗಿ ನಡೆಯಬೇಕಿದೆ~ ಎಂದು ಶಾಸಕ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಸಮೀಪದ ಲಕನಾಪುರ ಗ್ರಾಮದಲ್ಲಿ ಭಾನುವಾರ `ವಾಲ್ಮೀಕಿ ಯುವಕ ಮಂಡಳ~ ಉದ್ಘಾಟಿಸಿ ಅವರು ಮಾತನಾಡಿದರು. ಶಾಸಕ ಕಾಕಾ ಸಾಹೇಬ ಪಾಟೀಲ, ದಲಿತರು ತಮ್ಮ ಹಕ್ಕುಗಳನ್ನು ಪಡೆಯಲು ನಿರ್ಭೀತಿಯಿಂದ ಪ್ರಯತ್ನಿಸಬೇಕು. ತಾವು ಆ ಕಾರ್ಯಕ್ಕಾಗಿ ಸದಾ ಶ್ರಮಿಸುವುದಾಗಿ ಮತ್ತು ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಪೊಲೀಸ್ ಇಲಾಖೆಯ ಅನೀಲ ಅಪ್ಪಾಸಾಹೇಬ ನಾಯಿಕ, ಬಿಎಸ್ಎಫ್ ನ ಮಿಥುನ ಸುಭಾಷ, ಶೈಕ್ಷಣಿಕ ಕ್ಷೇತ್ರದ ರಾಜು ಅಪ್ಪಾಸಾಹೇಬ ನಾಯಿಕ, ಬೆಳಗಾವಿಯಲ್ಲಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ, ಮಿ. ಲಿಂಗರಾಜ ಪ್ರಶಸ್ತಿ ವಿಜೇತ ವಿನಾಯಕ ಕಾಂಬಳೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಜಿ.ಪಂ. ಸದಸ್ಯ ಅಣ್ಣಾಸಾಹೇಬ ನಾಯಿಕ, ನಿಪ್ಪಾಣಿ ನಗರಸಭೆ ಸೇವಕಿ ಭಾರತಿ ನಾಯಿಕ, ದಲಿತ ಕ್ರಾಂತಿ ಸೇನಾ ಸಂಘದ ಅಧ್ಯಕ್ಷ ಅಶೋಕ ಕುಮಾರ ಅಸೋದೆ, ಚೇತನ್ ಸ್ವಾಮಿ, ರಮೇಶ ಭಿವಶಿ, ಸಂಜಯ ದೇಸಾಯಿ, ರವಿನಾಯಿಕ ಹಾಜರಿದ್ದರು. ರಾಜು ಅಪ್ಪಣ್ಣಾ ನಾಯಿಕ ಸ್ವಾಗತಿಸಿದರು. ಅನೀಲ ನಾಯಿಕ ವಂದಿಸಿದರು.