ಬೆಂಗಳೂರು: ‘ಧರ್ಮ ಹಾಗೂ ರಾಜಕೀಯಕ್ಕೆ ಪ್ರತಿರೋಧ ತೋರುವ ಶಕ್ತಿ ಸೃಜನಶೀಲತೆಗಿದೆ’ ಎಂದು ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ಬೆಂಗಳೂರು ನಾರ್ಥ್ ಎಜುಕೇಷನ್ ಸೊಸೈಟಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಜನ್ನ ಸಾಹಿತ್ಯ ಚರಿತ್ರೆ’ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಧರ್ಮ ಹಾಗೂ ರಾಜಕೀಯ ಜನ ಸಾಮಾನ್ಯರನ್ನು ಸದಾ ಅಂಕೆಯಲ್ಲಿಟ್ಟು-ಕೊಳ್ಳಲು ಹವಣಿಸುತ್ತವೆ. ಆದರೆ, ಅದನ್ನು ಪ್ರತಿರೋಧಿಸುವ ಶಕ್ತಿ ಸೃಜನಶೀಲತೆಗಿದೆ. ಪಂಪ, ರನ್ನ, ಜನ್ನ, ರತ್ನಾಕರ ವರ್ಣಿ ಮೊದಲಾದ ಕವಿಗಳು ತಮ್ಮ ಸೃಜನಶೀಲತೆಯ ಮೂಲದ ಈ ಪ್ರತಿರೋಧವನ್ನು ತೋರುತ್ತಲೇ ಬಂದಿದ್ದಾರೆ. ಸೃಜನಶೀಲತೆ ಜಡತೆ-ಯನ್ನು ನೀಗಿಸಿ ಚೈತನ್ಯ ತುಂಬಬಲ್ಲದು’ ಎಂದು ನುಡಿದರು.
‘ಕನ್ನಡ ಸಾಹಿತ್ಯ ಚರಿತ್ರೆಯನ್ನು ಇಂದು ಹೊಸದಾಗಿ ಬರೆಯಬೇಕಿದೆ. ಹಳೆಯ ಕವಿಗಳ ಕಾವ್ಯದ ರೂಪಕಗಳ ಮಾದರಿಯಲ್ಲಿ ಇಂದಿನ ಸಂದರ್ಭವನ್ನು ಎದುರಿಸಬೇಕಾಗಿದೆ. ಕನ್ನಡದಲ್ಲಿ ಉತ್ತಮ ಸಾಹಿತ್ಯವಿದೆ. ಆದರೆ, ಅದನ್ನು ಜನರಿಗೆ ತಲುಪಿಸಬೇಕಾದ ಕಾರ್ಯ ಸರಿಯಾಗಿ ಆಗುತ್ತಿಲ್ಲ. ಇಂದಿನ ಹಲವರಿಗೆ ಹಳಗನ್ನಡವನ್ನು ಸರಿಯಾಗಿ ಓದಲೂ ಬರುವುದಿಲ್ಲ. ಹೀಗಾಗಿ ನಮ್ಮ ಸಾಹಿತ್ಯ ಪರಂಪರೆಯ ಸರಿಯಾದ ಪರಿಚಯ ಇಂದಿನ ಪೀಳಿಗೆಗೆ ಆಗುತ್ತಿಲ್ಲ’ ಎಂದು ಅಭಿಪ್ರಾಯ ಪಟ್ಟರು.
‘ಸಾರ್ವತ್ರಿಕವಾಗಿ ಮನುಷ್ಯನನ್ನು ಬಾಧಿಸುವ ಧರ್ಮ, ಕಾಮ, ಪ್ರೇಮಗಳಂಥ ವಿಷಯಗಳನ್ನು ಜನ್ನ ತನ್ನ ಕಾವ್ಯಗಳಲ್ಲಿ ತಂದಿದ್ದಾನೆ. ಈ ಮೂಲಕ ಜನ್ನ ಎಲ್ಲ ಕಾಲಕ್ಕೂ ಸಲ್ಲುವ, ಬಗೆದಷ್ಟೂ ಅರಿವಿನ ವಿಸ್ತಾರಕ್ಕೆ ದಕ್ಕುವ ಕವಿಯಾಗಿದ್ದಾನೆ’ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ನುಡಿದರು.
‘ರಾಜ್ಯದಲ್ಲಿ ಕನ್ನಡ ಭಾಷೆಯ ಬಗ್ಗೆ ಅಸಡ್ಡೆ ಹೆಚ್ಚಾಗಿದೆ. ವಿಷಯಕ್ಕೆ ಒಂದೊಂದು ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿ, ವಿಶ್ವವಿದ್ಯಾಲಯಗಳ ಪರಿಕಲ್ಪನೆಯೇ ಬದಲಾಗಿದೆ. ಸಾಮಾಜಿಕ ಬದಲಾವಣೆಗಾಗಿ ಶಿಕ್ಷಣವನ್ನು ಬಳಸಿಕೊಳ್ಳಬೇಕಾದ್ದು ಇಂದಿನ ಅಗತ್ಯ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ನಾ.ಮೊಗಸಾಲೆ, ಡಾ.ಕೆ.ಆರ್.ಗಣೇಶ್, ರಂಜಾನ್ ದರ್ಗಾ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮತ್ತು ಪ್ರೇಮಾಭಟ್ ಅವರನ್ನು ಸನ್ಮಾನಿಸಲಾಯಿತು.