ಹುಬ್ಬಳ್ಳಿ: ಸುಮಾರು ಒಂದೂವರೆ ವರ್ಷ ವಿರಾಮದ ನಂತರ ನಗರದ ‘ಹಾಕಿ ಗ್ರಾಮ’ ಸೆಟ್ಲ್ಮೆಂಟ್ನಲ್ಲಿ ಮತ್ತೆ ಹಾಕಿ ಕಲರವ. ನಿತ್ಯ ಬೆಳಿಗ್ಗೆ ಹಾಕಿ ಸ್ಟಿಕ್ ಮತ್ತು ಆಟಗಾರರ ಕೇಕೆಯ ಶಬ್ದ ಕೇಳಿ ಬರುವ ಇಲ್ಲಿನ ಯಂಗ್ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಇನ್ನು ನಾಲ್ಕು ದಿನ ಬಿಸಿಲಿನಲ್ಲೂ ಸೆಣಸಾಟ; ಸೋಲು–ಗೆಲುವಿನ ಲೆಕ್ಕಾಚಾರ.
ಹುಬ್ಬಳ್ಳಿಯಲ್ಲಿ ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಹುಬ್ಬಳ್ಳಿ ಹಾಕಿ ಅಕಾಡೆಮಿಯ ಮೊದಲ ಟೂರ್ನಾಮೆಂಟ್ ಬುಧವಾರ ಆರಂಭಗೊಂಡಿದ್ದು ಹೊರರಾಜ್ಯದ ಐದು ಸೇರಿದಂತೆ ಒಟ್ಟು ಹತ್ತು ತಂಡಗಳು ಪ್ರಶಸ್ತಿಯ ಕನಸಿನೊಂದಿಗೆ ಕಾದಾಡುತ್ತಿವೆ. ನಗರದಲ್ಲಿ ನಡೆಯುತ್ತಿರುವ ಈ ವರ್ಷದ ಮೊದಲ ಹಾಕಿ ಟೂರ್ನಿ ಇದು.
ಲೀಗ್ ಹಂತದಲ್ಲಿ ಪ್ರತಿ ತಂಡಗಳು ಒಂದೊಂದು ಬಾರಿ ಮುಖಾಮುಖಿಯಾಗಲಿದ್ದು ಮೊದಲ ಹಂತದ ಐದು ಪಂದ್ಯಗಳು ಬುಧವಾರ ಮುಕ್ತಾಯಗೊಂಡಿವೆ; ಆಟಗಾರರು ಪ್ರೇಕ್ಷಕರಿಗೆ ಉತ್ತಮ ಹೋರಾಟದ ಸವಿ ಉಣ ಬಡಿಸಿದ್ದಾರೆ. 11ನೇ ತಾರೀಕು ವರೆಗೆ ಪ್ರತಿದಿನ ತಲಾ ಐದು ಪಂದ್ಯಗಳು ನಡೆಯಲಿದ್ದು 12ರಂದು ಫೈನಲ್ ಪಂದ್ಯ ನಡೆಯಲಿದೆ.
ಆತಿಥೇಯ ಹುಬ್ಬಳ್ಳಿ ಹಾಕಿ ಅಕಾಡೆಮಿ (ಎಚ್ಎಚ್ಎ), ಯಂಗ್ಸ್ಟಾರ್ ಸ್ಪೋರ್ಟ್ಸ್ ಕ್ಲಬ್, ಕಿಶೋರ್ ಕುಮಾರ್ ಹಾಕಿ ಕ್ಲಬ್, ವಾಸು ಇಲೆವೆನ್ ಹಾಗೂ ಗದಗದ ಹನುಮಾನ್ ಬ್ಲೆಸಿಂಗ್ಸ್ ಸ್ಥಳೀಯ ತಂಡಗಳು. ಕೊಲ್ಹಾಪುರದ ಮಹಾರಾಷ್ಟ್ರ ಕ್ರೀಡಾ ಮಂಡಲ್, ಚಾವಾ, ಔರಂಗಾಬಾದ್ನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್), ಇಸ್ಲಾಂಪುರದ ಸುಭದ್ರ ಡಾಂಗೆ, ಸಂಜಯ್ ಪಾಟೀಲ ಕ್ಲಬ್ ಹೊರಗಿನಿಂದ ಬಂದಿರುವ ತಂಡಗಳು.
ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ, ರಾಷ್ಟ್ರೀಯ ಹಾಕಿ ತಂಡದ ಬಾಗಿಲು ಬಡಿಯುತ್ತಿರುವ ಅನೇಕ ಆಟಗಾರರು ಈ ತಂಡಗಳಲ್ಲಿದ್ದು ಹುಬ್ಬಳ್ಳಿ ಮತ್ತು ಸುತ್ತಮುತ್ತಲ ಕ್ರೀಡಾ ಪ್ರೇಮಿಗಳ ಮನತಣಿಸಲಿದ್ದಾರೆ. ಯಂಗ್ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ತಂಡದಲ್ಲಿ ವಿಶ್ವ ಹಾಕಿ ಸೀರೀಸ್ನಲ್ಲಿ ಪಾಲ್ಗೊಂಡ ವಿನಾಯಕ ಬಿಜವಾಡ, ಮಾನುಪ್ಪಟಿ, ಪ್ರತಿಭಾವಂತ ಡ್ರ್ಯಾಗ್ ಫ್ಲಿಕ್ಕರ್ ದೀಪಕ್ ಬಿಜವಾಡ, ಬಿಜು ಇರಕಲ್ ಮುಂತಾದವರು ಇದ್ದಾರೆ. ಹುಬ್ಬಳ್ಳಿ ಹಾಕಿ ಅಕಾಡೆಮಿ ಶಾಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮಕ್ಕಳನ್ನು ಕಣಕ್ಕೆ ಇಳಿಸಿದ್ದು ಈಚೆಗೆ ನಡೆದ ರಾಷ್ಟ್ರಮಟ್ಟದ ಪೈಕಾ ಕ್ರೀಡಾಕೂಟದ ಹಾಕಿಯಲ್ಲಿ ಮಿಂಚಿದ ‘ಪುಟಾಣಿ’ ಹಾಕಿಪಟುಗಳು ಗಮನ ಸೆಳೆಯುತ್ತಿದ್ದಾರೆ.
ಉದ್ಘಾಟನೆ: ಬುಧವಾರ ನಡೆದ ಸರಳ ಸಮಾರಂಭದಲ್ಲಿ ಪಾಲಿಕೆ ಸದಸ್ಯರಾದ ಲಕ್ಷ್ಮಿಬಾಯಿ ಯಮನೂರ ಜಾಧವ ಮತ್ತು ಲಕ್ಷ್ಮಿಬಾಯಿ ಬಿಜವಾಡ ಟೂರ್ನಿಯನ್ನು ಉದ್ಘಾಟಿಸಿದರು. ಕಾಂಗ್ರೆಸ್ ಮುಖಂಡ ಬಸವರಾಜ ಅಮ್ಮಿನಬಾವಿ ಅಧ್ಯಕ್ಷತೆ ವಹಿಸಿದ್ದರು. ವಾಸು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ದೇವೇಂದ್ರ ಬಳ್ಳಾರಿ, ದುರ್ಗಾದೇವಿ ಯುವಕ ಮಂಡಳದ ಅಧ್ಯಕ್ಷ ಶಿವಪ್ಪ ಬಿಜವಾಡ, ಶಾಂತಿನಿಕೇತನ ಯುವಕ ಮಂಡಳದ ಅಧ್ಯಕ್ಷ ಸುರೇಶ ಗೋಕಾಕ, ಹುಬ್ಬಳ್ಳಿ ಹಾಕಿ ಅಕಾಡೆಮಿಯ ಅಧ್ಯಕ್ಷ ರಾಮು ಭಜಂತ್ರಿ, ವಕ್ತಾರ ಬಾಲು ಎಂ. ಹಲಕುರ್ಕಿ ಮತ್ತಿತರರು ಉಪಸ್ಥಿತರಿದ್ದರು.
ಭಾಷಣ ತೊರೆದು ಶುಭ ಕೋರಿದ ಆತಿಥಿಗಳು
ಹುಬ್ಬಳ್ಳಿ ಹಾಕಿ ಅಕಾಡೆಮಿಯ ಅಂತರರಾಜ್ಯ ಹಾಕಿ ಟೂರ್ನಿಯ ಉದ್ಘಾಟನೆಗೆ ಬಂದಿದ್ದ ಅತಿಥಿಗಳು ಭಾಷಣ ಮಾಡಲೊಲ್ಲದೆ ಆಟಗಾರರಿಗೆ ಶುಭ ಹಾರೈಸಿ ಆದರ್ಶ ಮೆರೆದರು.
ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯುತ್ತಿದ್ದಂತೆ ಮೊದಲ ಪಂದ್ಯದ ಆಟಗಾರರು ಮೈದಾನದಲ್ಲಿ ಸಜ್ಜಾಗಿ ನಿಂತಿದ್ದರು. ಆಟಗಾರ ಪರಿಚಯ ಮಾಡಿಕೊಂಡು ವಾಪಸ್ ವೇದಿಕೆ ಮೇಲೆ ಬಂದ ಅತಿಥಿಗಳಲ್ಲಿ ಭಾಷಣ ಮಾಡುವಂತೆ ಸಂಘಟಕರು ಕೋರಿದರು. ಆದರೆ ಮುಖ್ಯ ಅತಿಥಿಗಳಾಗಿದ್ದ ಲಕ್ಷ್ಮಿಬಾಯಿ ಯಮನೂರ ಜಾಧವ ಮತ್ತು ಲಕ್ಷ್ಮಿಬಾಯಿ ಬಿಜವಾಡ ‘ಭಾಷಣ ಬೇಡ, ಆಟ ನಡೆಯಲಿ’ ಎಂದು ಶುಭಾಶಯ ಕೋರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.