ಬೆಂಗಳೂರು: ಸೇನಾ ಪಡೆಗೆ ಆಯ್ಕೆಯಾದ 215 ಯೋಧರು ನಗರದ ಎಎಸ್ಸಿ ಕೇಂದ್ರದಲ್ಲಿ ತರಬೇತಿ ಯಶಸ್ವಿಯಾಗಿ ಪೂರೈಸಿ ಶನಿವಾರ ನಿರ್ಗಮನ ಪಥ ಸಂಚಲನ ನಡೆಸಿದರು.
ಈ ಯೋಧರು ಕರ್ತವ್ಯ ಪಾಲನೆಯ ಪ್ರಮಾಣವಚನ ಸ್ವೀಕರಿಸಿದರು. ಎಎಸ್ಸಿ ಕೇಂದ್ರದ ಕಮಾಂಡಂಟ್ ಬ್ರಿಗೇಡಿಯರ್ ಎಸ್.ಪಿ. ಯಾದವ್ ಈ ಹೊಸ ಪಡೆ ನಡೆಸಿದ ಪಥ ಸಂಚಲನವನ್ನು ವೀಕ್ಷಿಸಿದರು. ತರಬೇತಿ ಪಡೆದ ಎಲ್ಲ ಯೋಧರಿಗೂ ಅವರು ಬ್ಯಾಡ್ಜ್ ತೊಡಿಸಿದರು. ಈ ಸಂದರ್ಭದಲ್ಲಿ ಯೋಧರ ತಂದೆ-ತಾಯಿಗಳು ಜೊತೆಯಲ್ಲಿ ಇದ್ದುದು ವಿಶೇಷವಾಗಿತ್ತು.
ತರಬೇತಿ ಪಡೆದ ಯೋಧರು ಅತ್ಯುತ್ತಮವಾಗಿ ಕವಾಯತು ನಡೆಸಿದ್ದು, ಎಲ್ಲರೂ ಅಭಿನಂದನಾರ್ಹರು ಎಂದು ಯಾದವ್ ತಿಳಿಸಿದರು. ಭಾರತೀಯ ಸೇನಾ ಪಡೆಯಲ್ಲಿ ಬೆಳೆಯಲು ಸಾಕಷ್ಟು ಅವಕಾಶಗಳಿದ್ದು, ವೃತ್ತಿಯಲ್ಲಿ ಶ್ರೇಷ್ಠತೆ ಸಾಧಿಸಲು ಎಲ್ಲರೂ ಯತ್ನಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಮೇಜರ್ ಬಿ.ಪಿ. ಸಿಂಗ್ ಪಥ ಸಂಚಲನದ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿದರು. ದೂರದ ಊರುಗಳಿಂದ ಬಂದಿದ್ದ ಯೋಧರ ಸಂಬಂಧಿಗಳು ಸಮಾರಂಭವನ್ನು ಆಸಕ್ತಿಯಿಂದ ಕಣ್ತುಂಬಿಕೊಂಡರು.