ಕೋಲಾರ: ಹಗಲಿರುಳು ಗ್ರಾಮೀಣ ಜನರ ಆರೋಗ್ಯ ಜವಾಬ್ದಾರಿ ವಹಿಸಿಕೊಂಡು ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ವೇತನ ನಿಗದಿಪಡಿಸಿಲ್ಲ. ಈಗಲಾದರೂ ಮಾನವೀಯತೆ ದೃಷ್ಟಿಯಿಂದ ವೇತನ ನಿಗದಿಪಡಿಸಿ ಸೇವಾ ಭದ್ರತೆ ನೀಡುವಂತೆ ರಾಜ್ಯ ಅಂಗನವಾಡಿ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ವರಲಕ್ಷ್ಮೀ ಒತ್ತಾಯಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ರಾಜ್ಯ ಅಂಗನವಾಡಿ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಈವರೆಗೂ ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಆಶಾ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇಂದಿಗೂ ವೇತನ ನಿಗದಿಪಡಿಸಿಲ್ಲ. ಕಾಯಂ ಗೊಳಿಸದೇ ದುಡಿಸಿಕೊಳ್ಳುತ್ತಿರುವುದು ಖಂಡನೀಯ ಎಂದರು.
ಪ್ರೋತ್ಸಾಹ ಧನ ವಿತರಣೆಯಲ್ಲಿಯೂ ಗಣನೀಯ ಕಡಿತಗೊಂಡಿದೆ. ಮೊದಲು ಹೆರಿಗೆಗೆ ಕರೆದುಕೊಂಡು ಹೋಗುವ ಆಶಾ ಕಾರ್ಯಕರ್ತೆಯರಿಗೆ ರೂ. 600 ನೀಡಲಾಗುತ್ತಿತ್ತು. ಆದರೆ ಈಗ ಕೇವಲ ರೂ. 200 ಮಾತ್ರ ನೀಡಲಾಗುತ್ತಿದೆ. ಅವರ ಅವಲಂಭಿತರು ಜೀವನ ಸಾಗಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಆರಂಭದಿಂದಲೂ ಪ್ರೋತ್ಸಾಹ ಧನ ಪರಿಷ್ಕರಣೆಗೆ ನೌಕರರು ಹೋರಾಡುತ್ತಿದ್ದರೂ ಸರ್ಕಾರ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು.
ಪ್ರಜ್ವಲ್, ಆರೋಗ್ಯ ಸೇವಾ ಸಂಸ್ಥೆ ಜಿಲ್ಲಾ ಘಟಕ ಸಂಯೋಜನಾಧಿಕಾರಿ ಎಸ್.ಶರಣ ಬಸಪ್ಪ, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ವಿಮಲಾಬಾಯಿ, ಜಿಲ್ಲಾ ಘಟಕದ ಅಧ್ಯಕ್ಷೆ ಜಿ.ಈಶ್ವರಮ್ಮ ಮತ್ತಿತರರು ಹಾಜರಿದ್ದರು.