ಮೈಸೂರು ಬಳಿ ಒಂದು ಡಿವಿಜನ್ ಸೇನೆ ಇಡಲು ಮುಖ್ಯಮಂತ್ರಿ ಸಲಹೆ
ಮೈಸೂರು, ಸೆ. 22– ಮೈಸೂರು ನಗರದ ಬಳಿ ಸಾಕಷ್ಟು ಭೂಮಿಯ, ನೀರಿನ ಹಾಗೂ ಇತರ ಸೌಕರ್ಯಗಳಿರುವುದರಿಂದ ಭಾರತೀಯ ಸೈನ್ಯದ ಒಂದು ಡಿವಿಜನ್ ಸೇನೆ ಇಡಲು ಕೇಂದ್ರ ಸರ್ಕಾರಕ್ಕೆ ತಾವು ಸಲಹೆ ಮಾಡಿರುವುದಾಗಿ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ತಿಳಿಸಿದರು.
ಸನ್ಮಾನ ಸಮಾರಂಭವೊಂದರಲ್ಲಿ ಶ್ರೀ ನಿಜಲಿಂಗಪ್ಪನವರು ಮಾತನಾಡುತ್ತ ಈ ಬಗ್ಗೆ ತಾವು ರಕ್ಷಣಾ ಸಚಿವ ಶಾಖೆಯೊಂದಿಗೆ ವ್ಯವಹರಿಸುತ್ತಿರುವುದಾಗಿಯೂ ಬೆಂಗಳೂರು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಅಲ್ಲಿರುವ ಕೆಲವು ಡಿವಿಜನ್ಗಳನ್ನು ಬೇರೆ ಪ್ರದೇಶಗಳಿಗೆ ವರ್ಗಾಯಿಸಲು ರಕ್ಷಣಾ ಸಚಿವ ಶಾಖೆ ಒಪ್ಪಿರುವುದಾಗಿಯೂ ತಿಳಿಸಿದರು.