ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರುವ ಕರುಳಿನ ಹಿಂದಿನ ಹಕೀಕತ್ತು

ವಿಜ್ಞಾನ ಲೋಕದಿಂದ
Last Updated 20 ಸೆಪ್ಟೆಂಬರ್ 2015, 19:45 IST
ಅಕ್ಷರ ಗಾತ್ರ

ಭಾರತದಲ್ಲಿ ಅಸಾಂಕ್ರಾಮಿಕ ರೋಗ ಗಳಲ್ಲಿ ಅತಿಸಾರ ಪ್ರಮುಖವಾದುದು. ಐದು ವರ್ಷದೊಳಗಿನ ಮಕ್ಕಳೇ ಹೆಚ್ಚಾಗಿ ಈ ರೋಗಕ್ಕೆ ತುತ್ತಾಗುತ್ತಾರೆ. ಆರೋಗ್ಯಕರ ಕರುಳು ಆರೋಗ್ಯಕರ ಜೀವನಕ್ಕೆ ಅತ್ಯಾವಶ್ಯಕ. ಕರುಳಿನಲ್ಲಿ ಸಣ್ಣ ಏರುಪೇರು ಉಂಟಾದರೂ ಅತಿಸಾರ ಇಲ್ಲವೆ ಸೋರುವ ಕರುಳುಗಳಿಗೆ ಎಡೆಮಾಡಿ ಕೊಟ್ಟಹಾಗೆ. ಈ ಕಾಯಿಲೆಯು ಸಣ್ಣ ಕಿರಿಕಿರಿ ಉಂಟು ಮಾಡುವುದರಿಂದ ಹಿಡಿದು ಮಾರಣಾಂತಿಕದವರೆಗೆ ವ್ಯಾಪಿಸ ಬಹುದು.

ಕರುಳಿನ​ಲ್ಲಿ ಉಂಟಾಗುವ, ​​ಹಿಂದೆಂದೂ ತಿಳಿದಿರದ, ಕೆಲವು ವಿಶಿಷ್ಟ​ ತೊಂದರೆಗ​ಳಿಗೆ​ ಕಾರಣವಾಗುವ ಕೆಲವು ರೂಪಾಂತರ ಗಳನ್ನು​ ​(Mutations)​ ಬೆಂಗಳೂರಿನ​ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಗಳು, ಆಸ್ಟ್ರಿಯಾ ಮತ್ತು ನಾರ್ವೆ ತಂಡಗಳ ಸಹಯೋಗದೊಂದಿಗೆ ಕಂಡು ಹಿಡಿದಿದ್ದಾರೆ.

ಜಿಸಿಸಿ ಪಾತ್ರ: ಅತಿಸಾರ ಸಮಸ್ಯೆಯಲ್ಲಿ ಜನ್ಮಜಾತ ಸೋಡಿಯಂ ಅತಿಸಾರ​ ​ (​Congenital Sodium Diarrhea) ಮತ್ತು​ ಕೌಟುಂಬಿಕ ಅತಿಸಾರ ​ರೋಗಚಿಹ್ನೆ (Familial Diarrhea Syndrome) ಇವೆರಡು ​ಅತಿ ​ ವಿರಳ ಸ್ಥಿತಿ ಎನಿಸಿವೆ​. ಈ ಸ್ಥಿತಿಯಲ್ಲಿ ರೋಗಿಗಳು ದೀರ್ಘಕಾಲದ ಅತಿಸಾರದಿಂದ ಬಳಲುತ್ತಾರೆ​. ಇದರಿಂದ ಅವರು ಅನಿವಾರ್ಯವಾಗಿ ನಿರ್ಜಲೀಕರಣದ ಪ್ರಭಾವ, ಇರಿಟೇಬಲ್ ಬೊವೆಲ್ ಸಿಂಡ್ರೋಮ್ ಮತ್ತು ಇನ್‌ಫ್ಲಮೇಟರಿ ಬೊವೆಲ್ ಕಾಯಿಲೆಗೆ ಒಳಗಾಗುತ್ತಾರೆ.

ಈ ಎರಡೂ ತೊಂದರೆಗಳು, ಪ್ರೋಟಿನ್ ಗ್ರಾಹಕಗಳಾದ​ ಗುಆನೈಲೇಟ್ ​​ ಸೈಕ್ಲೇಸ್​ (guanylate cyclase C – ಜಿಸಿಸಿ)​ ರೂಪಾಂತರದಿಂದ ಉಂಟಾಗುತ್ತವೆ. ಈ ಗ್ರಾಹಕಗಳು​ ಜಾಲದಲ್ಲಿ ​ ‘ಎರಡನೇ ಸಂದೇಶವಾಹಕ​’ಗಳಾಗಿ​ ಒಂದು ಪ್ರಮುಖ ಭಾಗವಾಗಿದ್ದು ಕೋಶಗಳ ಸಂಕೇತ ವಿನಿಮಯದಲ್ಲಿ ನಿರ್ಣಾಯಕವಾಗಿವೆ.

ಎರಡನೇ ಸಂದೇಶವಾಹಕಗಳು ಕೋಶಗಳ ಹೊರಗಿನಿಂದ ಒಳಗೆ ಸಂಕೇತಗಳನ್ನು ರವಾನಿಸಲು ಸಹಾಯ ಮಾಡುವ ಪ್ರಮುಖ ಅಣುಗಳು, ಸಂಕೇತ ಸ್ವೀಕರಿಸಿದ್ದು ಮತ್ತು ಉತ್ತರಿಸಿದ್ದನ್ನು ಖಾತ್ರಿಪಡಿಸುತ್ತವೆ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿರುವ ಪ್ರೊ.ಸಂಧ್ಯಾ ವಿಶ್ವೇಶ್ವರಯ್ಯ ಅವರ ಪ್ರಯೋಗಶಾಲೆಯಲ್ಲಿ ಎರಡನೇ ಸಂದೇಶವಾಹಕಗಳ ಕೋಶ ಸಂಕೇತಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ​.

ಅವರು ಮತ್ತು ಅವರ ಹಳೆಯ ವಿದ್ಯಾರ್ಥಿಗಳಾದ ಡಾ. ​ ನಾಜಿಲ್‌ ಅರ್ಷದ್ ಮತ್ತು ಇನ್ಶಾ ರಸೂಲ್ ಜಂಟಿಯಾಗಿ ಎರಡು ಬಗೆಯ ಗ್ಯಾಸ್ಟ್ರೋ-ಕರುಳಿನ ತೊಂದರೆಯನ್ನು ಉಂಟುಮಾಡುವಲ್ಲಿ​ ಜಿಸಿಸಿ ಪಾತ್ರವನ್ನು ಕಂಡುಹಿಡಿದಿದ್ದಾರೆ. ಜಿಸಿಸಿ, ಸೈಕ್ಲಿಕ್ ಗುಆನೊಸಿನ್ ಮೊನೊಫಾಸ್ಫೇಟ್ (ಸಿ.ಜಿ.ಎಮ್.ಪಿ) ಅನ್ನು ಉತ್ಪಾದಿಸುತ್ತದೆ, ಇದು ಮಾನವನ ಕರುಳಿನಲ್ಲಿ ನೀರು ಮತ್ತು ವಿದ್ಯುದ್ವಿಚ್ಛೇದ್ಯವನ್ನು ಹೀರಿಕೊಳ್ಳುವ ಮತ್ತು ಹೊರಹಾಕುವ ಎರಡನೇ ಸಂದೇಶವಾಹಕ.

ಜಿಸಿಸಿ ಗ್ರಾಹಕಗಳಲ್ಲಾಗುವ ರೂಪಾಂತರಗಳಿಂದ ಕರುಳಿನ ಅತಿಸಾರ ಉಂಟಾಗಬಹುದು ಎಂಬ ವರದಿ ಹೊರದೇಶದಲ್ಲಿರುವ ವೈದ್ಯರ ಗಮನವನ್ನು ಸೆಳೆ​ದಿದೆ. ‘ನಾರ್ವೆಯ ಕುಟುಂಬ ವೊಂದರ ಮೇಲೆ ನಾವು ನಡೆಸಿದ ಅಧ್ಯಯನವನ್ನು ಗಮನಿಸಿದ ಆಸ್ಟ್ರಿಯಾದ ಇನ್ಸ್ ಬ್ರುಕ್ ವೈದ್ಯಕೀಯ ವಿಶ್ವವಿದ್ಯಾನಿಲಯದ ವೈದ್ಯರು ನಮ್ಮೊಂದಿಗೆ ವಿಚಾರ ವಿನಿಮಯ ಮಾಡಿ ಕೊಳ್ಳಲು ಪ್ರಸ್ತಾಪಿಸಿದರು’ ಎಂದು ಸಂಧ್ಯಾ ತಮ್ಮ ಅಂತರರಾಷ್ಟ್ರೀಯ ಸಹಯೋಗಗಳ ಬಗ್ಗೆ ವಿವರಿಸುವಾಗ ಹೇಳುತ್ತಾರೆ.

ಪ್ರೊ.​ ​ ಸಂಧ್ಯಾ ಅವರ​ ತಂಡ ಜಿಸಿಸಿ ಸಂಕೇತಗಳ ಹಿಂದಿನ ಮೂಲಭೂತ ವಿಜ್ಞಾನದ ಮೇಲೆ ಎರಡು ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ರೂಪಾಂತರಗಳನ್ನು ಗ್ರಾಹಕಗಳ ಬೇರೆ ಬೇರೆ ಪ್ರದೇಶಗಳಲ್ಲಿ ಉತ್ಪಾದಿಸಿ ಮತ್ತು ನಿರೂಪಿಸಿ ಈ ಕೆಲಸ ಮಾಡುತ್ತಿದ್ದಾರೆ.

‘ಸಂಶೋಧನೆಯ​ ಹಂತದಲ್ಲಿ ನಾವು​ ಸರಿಯಾದ ಸಮಯ ಮತ್ತು ಸರಿಯಾದ ಜಾಗದಲ್ಲಿದ್ದೆವು. ನಾರ್ವೆಯ ತಂಡ​ (ಹ್ಯೂಕ್‌ಲ್ಯಾಂಡ್ ವಿಶ್ವವಿದ್ಯಾ ನಿಲಯ ಆಸ್ಪತ್ರೆ ಮತ್ತು ಬೆರ್ಗನ್ ವಿಶ್ವವಿದ್ಯಾನಿಲಯ) ನಮ್ಮನ್ನು ಒಂದು ರೂಪಾಂತರಕ್ಕೆ ಸಂಬಂಧಿಸಿದಂತೆ ಸಂಪರ್ಕಿಸಿತು. ಜಿಸಿಸಿ ರೂಪಾಂತರ ಮತ್ತು ಕೌಟುಂಬಿಕ ಅತಿಸಾರ ಕೊಂಡಿಯ ಕುರಿತು ನಡೆಸಲಾದ ಆವಿಷ್ಕಾರ, ಪ್ರತಿಷ್ಠಿತ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾಗಿ, ವೈದ್ಯಕೀಯ ವಿಜ್ಞಾನದ ವಿಭಾಗದಲ್ಲಿ ‘ಅತ್ಯುತ್ತಮ ​ಲೇಖನ’ ಎಂಬ ಪ್ರಶಸ್ತಿಗೆ ಪಾತ್ರವಾಗಿತ್ತು.

ಈ ಪ್ರಕಟಣೆಯ ಹಿಂದೆಯೇ, ವೈದ್ಯರು ಸ್ರಾವಕ ಅತಿಸಾರವಿರುವ ಮಕ್ಕಳಲ್ಲಿನ ರೂಪಾಂತರಗಳನ್ನು ಕಂಡು ಪ್ರೊ.​ ಸಂಧ್ಯಾ ಅವರನ್ನು ಸಂಪರ್ಕಿಸಿದರು. ‘ಅದರಲ್ಲಿನ ಒಂದು ರೂಪಾಂತರ ಬಹಳ ವರ್ಷಗಳ ಹಿಂದೆ ನಾವು ಗ್ರಾಹಕಗಳು ಮತ್ತು ಸಕ್ರಿಯಗೊಳಿಸುವಿಕೆ ಬಗ್ಗೆ ಅಧ್ಯಯನ ಮಾಡುವಾಗ ವರ್ಣಿಸಿದ್ದ ರೂಪಾಂತರವೇ ಆಗಿತ್ತು’ ಎಂದು ಅವರು ಹೇಳುತ್ತಾರೆ.

ಐರೋಪ್ಯ ದೇಶದ ವೈದ್ಯರ ಸಹಯೋಗದೊಂದಿಗೆ ನಡೆದ ಈ ಕೆಲಸದಿಂದ ಕರುಳಿನ ರೋಗದ ಮತ್ತು ಜಿಸಿಸಿ ನಡುವಿನ ಒಂದಲ್ಲ, ಎರಡು ಕೊಂಡಿಯನ್ನು ಕಂಡುಹಿಡಿಯಲು ಎಡೆ ಮಾಡಿಕೊಟ್ಟಿದೆ. ಈ ಮಹತ್ವದ ಕೆಲಸ, ಕಾರಣವೇ ಗೊತ್ತಿಲ್ಲದ ದೀರ್ಘಕಾಲದ ಅಸಾಂಕ್ರಾಮಿಕ ಅತಿಸಾರದ ಬಗ್ಗೆ ಉತ್ತರ ಹುಡುಕಲು ನೆರವಾಗುತ್ತದೆ ಎನ್ನುತ್ತಾರೆ ಸಂಧ್ಯಾ.

‘ಕಾರಣ ಗೊತ್ತಿಲ್ಲದ ಅತಿಸಾರದಿಂದ ಬಳಲುತ್ತಿರುವವರ ಜಿಸಿಸಿ ಅನುಕ್ರಮ ವನ್ನು ನೋಡಿದರೆ ಕಾಯಿಲೆ ಮೂಲ ಪತ್ತೆಮಾಡಲು ಸಾಧ್ಯ. ಹೊರದೇಶಗಳ ವೈದ್ಯರು ಸಂಧ್ಯಾ ಅವರಿಗೆ ತಮ್ಮ ಪ್ರಕರಣಗಳನ್ನು ಕೊಡಲು ಉತ್ಸುಕ ರಾಗಿದ್ದಾರೆ. ಭಾರತದ ವೈದ್ಯರ ಜೊತೆಗೆ ಈ ತರಹದ ಯಾವುದೇ ಸಹಯೋಗ ವಿಲ್ಲ ಎಂಬ ನಿರಾಶೆ ಅವರದಾಗಿದೆ.

ಹೊಸ ಆವಿಷ್ಕಾರಗಳು ಹಲವು ರೋಗಗಳಿಗೆ ಮದ್ದು ಕಂಡುಹಿಡಿಯಲು ಸಹಾಯವಾಗಬಹುದು. ‘ಈ ಲಕ್ಷಣ ಗಳಲ್ಲಿ ಗ್ರಾಹಕಗಳ ಪಾತ್ರವು ನಮಗೆ ತಿಳಿದಿರುವುದರಿಂದ, ಕಳುಹಿಸುವ ಸಂಕೇತಗಳಿಗೆ ರಾಸಾಯನಿಕ ಪ್ರತಿರೋಧ ಕಗಳಾದ ಸಿಎಫ್‌ಟಿಆರ್ ಅಥವಾ ಪಿಕೆಜಿ2 ಪ್ರತಿರೋಧಕಗಳು ಈ ತರಹದ ದೀರ್ಘಕಾಲದ ಕಾಯಿಲೆ ಯಿಂದ ಬಳಲುತ್ತಿರುವ ರೋಗಿಗಳಿಗೆ ಉಪ ಯೋಗ ಆಗಬಹುದು’ ಎಂದು ಅವರು ಹೇಳುತ್ತಾರೆ.

ಜಿಸಿಸಿ ಅಧ್ಯಯನದ ಭವಿಷ್ಯ ಪ್ರೊ.​ ಸಂಧ್ಯಾ ಅವರ ಪ್ರಯೋಗಶಾಲೆಯಲ್ಲಿ ಭರವಸೆ ತುಂಬುವಂತಹುದಾಗಿದೆ. ಕರುಳಿನ ಆರೋಗ್ಯದ ಮೇಲೆ ಸಿಜಿಸಿಯ ಪಾತ್ರದ ಬಗ್ಗೆ ಅಧ್ಯಯನ ನಡೆಸಲು ಅವರಿಗೆ​​ ಇತ್ತೀಚೆಗೆ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಸಂಸ್ಥೆಯಿಂದ ಅನುದಾನ ದೊರಕಿದೆ.

ಪ್ರತಿಶತ 24ರಷ್ಟು ನವಜಾತ ಶಿಶುಗಳ ಮರಣಕ್ಕೆ ಕಾರಣ ಅತಿಸಾರ​ ​ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ ವರದಿ. ಹೊಸ ಸಂಶೋಧನೆ ಈ ಸಾವುಗಳನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗುತ್ತದೆ. ರೋಗದ ಕಾರಣ ತಿಳಿದರೆ​, ಅದಕ್ಕೆ ಮದ್ದನ್ನು ಕಂಡುಹಿಡಿಯಲು​ ಅರ್ಧ ​ ದಾರಿ ಎಂಬುದು ವೈದ್ಯಲೋಕ ದಲ್ಲಿ ಬಲು ಪ್ರಚಲಿತದಲ್ಲಿರುವ ನಾಣ್ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT