ಮೊಹಾಲಿ: ‘ಭಾರತ ಮತ್ತು ಪಾಕ್ ವಿರುದ್ಧದ ಪಂದ್ಯ ವೀಕ್ಷಿಸುವುದು ಅತ್ಯಂತ ಖುಷಿಯ ಸಂಗತಿ. ಅದರಲ್ಲೂ ಭಾರತದ ನೆಲಕ್ಕೆ ಬಂದು ಇಂತಹ ಹೈವೋಲ್ಟೇಜ್ ಪಂದ್ಯವನ್ನು ನೋಡುವುದು ಭಾಗ್ಯವೇ ಸರಿ’-ಇದು ಪಾಕಿಸ್ತಾನ ತಂಡದ ನಾಯಕ ಶಾಹಿದ್ ಆಫ್ರಿದಿಯ ಸಹೋದರ ಮುಸ್ತಾಕ್ ಆಫ್ರಿದಿ ಹೇಳುವ ಮಾತು. ಮೊಹಾಲಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯ ವೀಕ್ಷಿಸಲು ಬಂದಿದ್ದ ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದರು.
‘ಉಭಯ ದೇಶಗಳ ತಂಡಗಳ ನಡುವೆ ಹೆಚ್ಚಿನ ಪಂದ್ಯಗಳು ನಡೆಯಬೇಕು. ಎರಡೂ ದೇಶಗಳ ಸೌಹಾರ್ದ ಸಂಬಂಧಕ್ಕಾಗಿ ಕ್ರಿಕೆಟ್ನಿಂದ ನೆರವು ಸಿಗಲು ಸಾಧ್ಯ. ಕ್ರಿಕೆಟ್ನಿಂದ ನೆರೆಯ ರಾಷ್ಟ್ರಗಳ ಸಂಬಂಧವೂ ಸುಧಾರಿಸುತ್ತದೆ’ ಎಂದು ಮುಸ್ತಾಕ್ ಅಭಿಪ್ರಾಯಪಟ್ಟಿದ್ದಾರೆ.
‘ಉಭಯ ರಾಷ್ಟ್ರಗಳ ಪ್ರಧಾನಮಂತ್ರಿಗಳು ಪಂದ್ಯ ವೀಕ್ಷಿಸಲು ಆಗಮಿಸುತ್ತಿರುವುದು ಅದ್ಭುತ ವಿಷಯ. ಎರಡೂ ದೇಶಗಳ ಹಲವು ಪ್ರಮುಖ ವ್ಯಕ್ತಿಗಳೂ ಅವರೊಂದಿಗೆ ಆಗಮಿಸುತ್ತಿರುವುದು ಒಳ್ಳೆಯ ಸಂಗತಿ. ಇದರಿಂದ ದೇಶಗಳ ಸಂಬಂಧ ಸುಧಾರಣೆಯಾಗುವ ಭರವಸೆ ಮೂಡಿದೆ’ ಎಂದರು.