ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 12 ಸ್ಥಾಯಿ ಸಮಿತಿಗಳಿಗೆ ಮಂಗಳವಾರ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮೇಯರ್ ಬಿ.ಎಸ್. ಸತ್ಯನಾರಾಯಣ ಚುನಾವಣಾ ಪ್ರಕ್ರಿಯೆ ನಡೆಸಿದರು. ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ ಆಗುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟ ಎಲ್ಲ ಆಸ್ತಿಗಳ ದಾಖಲೀಕರಣ ಮಾಡಿ, ತೆರಿಗೆ ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆ ರೂಪಿಸಲು ಯತ್ನಿಸಲಾಗುವುದು ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಡಾ. ಎಂ.ಎಸ್. ಶಿವಪ್ರಸಾದ್ ಹೇಳಿದರು.
ತ್ಯಾಜ್ಯಮುಕ್ತ ನಗರವನ್ನಾಗಿ ರೂಪಿಸಲು ನಮ್ಮ ಸಮಿತಿ ಸಾಧ್ಯವಾದ ಪ್ರಯತ್ನ ಮಾಡಲಿದೆ ಎಂದು ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಶಿರೇಖಾ ಜಯರಾಂ ತಿಳಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷರ ವಿವರ ಹೀಗಿದೆ: ಡಾ.ಎಂ.ಎಸ್. ಶಿವಪ್ರಸಾದ್ (ತೆರಿಗೆ ಮತ್ತು ಆರ್ಥಿಕ), ಎಸ್. ಶಶಿರೇಖಾ ಜಯರಾಂ (ಸಾರ್ವಜನಿಕ ಆರೋಗ್ಯ), ಉಮೇಶ್ ಶೆಟ್ಟಿ (ನಗರ ಯೋಜನೆ), ಬಿ.ಸೋಮಶೇಖರ್ (ಬೃಹತ್ ಕಾಮಗಾರಿ), ಎ.ಎಚ್. ಬಸವರಾಜು (ವಾರ್ಡ್ಮಟ್ಟದ ಕಾಮಗಾರಿ), ರೇಖಾ (ಲೆಕ್ಕಪತ್ರ), ಕೋದಂಡರೆಡ್ಡಿ (ಶಿಕ್ಷಣ), ಶಾಹೀನ್ ಹಸೀನಾ ತಾಜ್ (ಸಾಮಾಜಿಕ ನ್ಯಾಯ), ಆರ್. ಚಂದ್ರಶೇಖರಯ್ಯ (ಅಪೀಲು), ಎಂ.ಮುನಿರಾಜು (ತೋಟಗಾರಿಕೆ), ವೈ.ಆರ್. ಗೌರಮ್ಮ (ಮಾರುಕಟ್ಟೆ) ಮತ್ತು ಲಕ್ಷ್ಮಿಕಾಂತ್ ರೆಡ್ಡಿ (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ).