ಪೀಣ್ಯ ದಾಸರಹಳ್ಳಿ: ಶಾಲೆಗಳಲ್ಲಿ ನಡೆಯುವ ಸ್ಪರ್ಧೆಗಳು ಮಕ್ಕಳ ಪ್ರತಿಭೆ ಬೆಳಕಿಗೆ ಬರಲು ಕಾರಣವಾಗುವ ಜತೆಗೆ ಮಕ್ಕಳ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತವೆ ಎಂದು ವಿಶಾಲ್ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಟಿ.ಕೆ.ನರಸೇಗೌಡ ಹೇಳಿದರು.
ದಾಸರಹಳ್ಳಿಯ ಪೈಪ್ಲೈನ್ ರಸ್ತೆಯ ವಿಶಾಲ್ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ನಡೆದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಜಾನಪದ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಬೆಳೆಯುವ ಮಕ್ಕಳಿಗೆ ಶಾಲೆಯ ಸ್ಪರ್ಧೆಗಳು ಸಂಕೋಚವನ್ನು ಹೋಗಲಾಡಿಸಿ ಮುಂದಿನ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದರು.
ಕ್ರೀಡೆಯ ಮಾದರಿಯಲ್ಲಿ ಶಾಲೆಗಳಲ್ಲಿ ಜನಪದ ಕಲೆಗಳು ಪಠ್ಯದ ಜತೆಗೆ ಮಕ್ಕಳ ಬೆಳವಣಿಗೆಗೆ ಪೂರಕವಾಗಬೇಕಿದೆ. ಶಿಕ್ಷಕರು ಮಕ್ಕಳಲ್ಲಿ ಜನಪದ ಕಲೆಗಳ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕ ಎಚ್.ಆರ್.ರಾಮಯ್ಯ, ಶಿಕ್ಷಕರಾದ ತಿಮ್ಮೇಗೌಡ, ಶಂಕರ್, ಕೃಷ್ಣಮೂರ್ತಿ ಇದ್ದರು.