ಚಿತ್ರದುರ್ಗ: ನಗರದ ಜಿಲ್ಲಾ ಆಸ್ಪತ್ರೆ ಮುಂಭಾಗದ ಗೂಡಂಗಡಿಗಳನ್ನು ಮಂಗಳವಾರ ಬೆಳಿಗ್ಗೆ ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು.
ಗೂಡಂಗಡಿಗಳಲ್ಲಿ ಸ್ವಚ್ಛತೆ ಕಾಪಾಡದ ಹಿನ್ನೆಲೆಯಲ್ಲಿ ನಗರಸಭೆ ಈ ಕ್ರಮಕೈಗೊಳ್ಳಲು ಮುಂದಾಯಿತು.
ಕಾರ್ಯಾಚರಣೆ ಸಂದರ್ಭದಲ್ಲಿ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಗೂಡಂಗಡಿಯೇ ನಮಗೆ ಜೀವನಾಧಾರ. ನಮ್ಮ ಬದುಕನ್ನೇ ಕಿತ್ತುಕೊಂಡರೆ ಹೇಗೆ?. ನಮಗೆ ಯಾವುದೇ ರೀತಿ ಪರ್ಯಾಯ ವ್ಯವಸ್ಥೆ ಇಲ್ಲ ಎಂದು ಅಳಲು ತೋಡಿಕೊಂಡರು. ಅಂಗವಿಕಲರೊಬ್ಬರು ಒಂದು ವಾರ ಕಾಲ ಸಮಯಾವಕಾಶ ನೀಡಬೇಕು ಎಂದು ಕೋರಿದರು.
ಆದರೆ, ಯಾವುದಕ್ಕೂ ಸೊಪ್ಪು ಹಾಕದ ಅಧಿಕಾರಿಗಳು ಸುಮಾರು 6 ತಿಂಗಳಿಗೂ ಹೆಚ್ಚು ಕಾಲ ನಿಮಗೆ ನಾವು ಗಡುವು ನೀಡಿದ್ದೇವೆ. ಈ ಬಗ್ಗೆ ಮಾಹಿತಿ ಸಹ ನೀಡಲಾಗಿತ್ತು. ಆದರೂ ಪರಿಸ್ಥಿತಿ ಸುಧಾರಿಸಿದ ಕಾರಣ ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ವಿಜಯಕುಮಾರ, ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್ ಮತ್ತು ಸದಸ್ಯರ ಸಮ್ಮುಖದಲ್ಲಿ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಯಿತು.
ಜನರ ಆರೋಗ್ಯದ ದೃಷ್ಟಿಯಿಂದ ಗೂಡಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದು ಪೌರಾಯುಕ್ತ ವಿಜಯಕುಮಾರ್ ತಿಳಿಸಿದರು.