ಮೆಲ್ಬರ್ನ್, (ಪಿಟಿಐ): ಭಾರತಕ್ಕೆ ಯುರೇನಿಯಂ ಪೂರೈಕೆ ವಿಷಯದಲ್ಲಿ ಆಸ್ಟ್ರೇಲಿಯಾ ಮುಖಂಡರೊಂದಿಗೆ ವಿಫಲ ಮಾತುಕತೆಯ ನಂತರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಶುಕ್ರವಾರ ಸ್ವದೇಶಕ್ಕೆ ಹಿಂತಿರುಗಿದರು.
ವಿದೇಶಾಂಗ ಸಚಿವರುಗಳ ಏಳನೇ ಸುತ್ತಿನ ಚೌಕಟ್ಟಿನ ಮಾತುಕತೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಆಸ್ಟ್ರೇಲಿ ಯಾಕ್ಕೆ ತೆರಳಿದ್ದ ಕೃಷ್ಣ ಅವರು, ಇದೇ ಸಂದರ್ಭವನ್ನು ಬಳಸಿಕೊಂಡು ಭಾರತಕ್ಕೆ ಯುರೇನಿಯಂ ಪೂರೈಕೆ ಮಾಡುವಂತೆ ಅಲ್ಲಿನ ಮುಖಂಡರಿಗೆ ಮನವಿ ಮಾಡಿದ್ದರು.
ತಮ್ಮ ಮೂರು ದಿನಗಳ ಅಧಿಕೃತ ಭೇಟಿಯ ವೇಳೆ ಕೃಷ್ಣ ಅವರು ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಕೆವಿನ್ ರುಡ್ ಹಾಗೂ ಇತರ ನಾಯಕರುಗಳ ಜೊತೆ ಪ್ರಾದೇಶಿಕ ಹಾಗೂ ದ್ವಿಪಕ್ಷೀಯ ವಿಷಯಗಳ ಕುರಿತು ಮಾತುಕತೆ ನಡೆಸಿದರು.