26/11ರ ನಿಯಂತ್ರಣ ಕೊಠಡಿಯಲ್ಲಿಐಎಸ್ಐ ಅಧಿಕಾರಿಗಳು ಭಾಗಿ
ನವದೆಹಲಿ: 26/11ರಂದು ಮುಂಬೈ ಮೇಲೆ ಭಯೋತ್ಪಾದಕರ ದಾಳಿ ನಡೆದಾಗ ಕರಾಚಿಯ ನಿಯಂತ್ರಣಾ ಕೊಠಡಿಯಲ್ಲಿ ಉಪಸ್ಥಿತರಿದ್ದ 10 ಜನರಲ್ಲಿ ಹಾಗೂ ಇಬ್ಬರು ಐಎಸ್ಐ ಅಧಿಕಾರಿಗಳು ಹಾಗೂ ಲಷ್ಕರ್-ಏ-ತೊಯ್ಬಾ ನಾಯಕನೊಬ್ಬ ಇದ್ದ ಎಂಬ ಸತ್ಯ ಈಗ ಬಯಲಾಗಿದೆ.
ಇತ್ತೀಚೆಗೆ ಬಂಧಿತನಾದ ಉಗ್ರ ಅಬು ಜುಂದಾಲ್ನಿಂದ ಈ ಮಾಹಿತಿ ಸಂಗ್ರಹಿಸಲಾಗಿದೆ. ಲಷ್ಕರ್ ಉಗ್ರನನ್ನು ಅಬು ಜುಂದಾಲ್ `ಮೇಜರ್ ಜನರಲ್ ಸಾಹೇಬ್~ ಎಂದು ಕರೆಯುತ್ತಿದ್ದಾನೆ. ಆದರೆ, ಈ ಲಷ್ಕರ್ ನಾಯಕ ಯಾರು ಎಂಬುದನ್ನು ತನಿಖಾ ಸಂಸ್ಥೆಗಳು ಪತ್ತೆಹಚ್ಚಬೇಕಿದೆ.
ನಿಯಂತ್ರಣ ಕೊಠಡಿಯಲ್ಲಿ ಇಬ್ಬರು ಐಎಸ್ಐ ಅಧಿಕಾರಿಗಳು ಇದ್ದರು ಎಂಬುದು ಮಾತ್ರ ಖಾತ್ರಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
`ರಾ~ ಅಧಿಕಾರಿಗಳ ಭ್ರಷ್ಟಾಚಾರದ ವಿವರ ಕೇಳಿದ ಮಾಹಿತಿ ಆಯೋಗ
ನವದೆಹಲಿ (ಪಿಟಿಐ): ದೇಶದ ಬಾಹ್ಯ ಬೇಹುಗಾರಿಕಾ ಸಂಸ್ಥೆಯಾದ `ರಾ~ (ರೀಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್) ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣಗಳು, ಮಾನವ ಹಕ್ಕು ಉಲ್ಲಂಘನೆ ಹಾಗೂ ಲೈಂಗಿಕ ಕಿರುಕುಳದ ಪ್ರಕರಣಗಳ ಕುರಿತು ವಿವರ ಒದಗಿಸುವಂತೆ ಕೇಂದ್ರ ಮಾಹಿತಿ ಆಯೋಗ `ರಾ~ಗೆ ಸೂಚನೆ ನೀಡಿದೆ.
ಪಾರದರ್ಶಕ ಕಾಯ್ದೆ ಅಡಿ ತನಗೆ ವಿನಾಯತಿ ನೀಡಲಾಗಿದೆ ಎಂದು `ರಾ~ ಸಲ್ಲಿಸಿದ್ದ ಅರ್ಜಿಯನ್ನು ಮನ್ನಿಸದ ಮಾಹಿತಿ ಹಕ್ಕು ಆಯುಕ್ತರು ಹತ್ತು ದಿನಗಳ ಒಳಗೆ `ರಾ~ ಅಧಿಕಾರಿಗಳ ವಿರುದ್ಧ ದಾಖಲಾದ ಪ್ರಕರಣಗಳ ಪೂರ್ಣ ವಿವರ ಒದಗಿಸುವಂತೆ ನಿರ್ದೇಶನ ನೀಡಿದ್ದಾರೆ. 2010ರಲ್ಲೇ `ರಾ~ ಸಂಸ್ಥೆಗೆ ಈ ವಿವರ ಸಲ್ಲಿಸುವಂತೆ ಕೇಳಲಾಗಿತ್ತು.
ಮಾಹಿತಿ ಹಕ್ಕು ಕಾಯ್ದೆಯ 24ನೇ ಕಲಂ ಅನ್ವಯ ಸಿಬಿಐ, `ರಾ~ ಇತ್ಯಾದಿ ಸಂಸ್ಥೆಗಳಿಗೆ ಮಾಹಿತಿ ಬಹಿರಂಗಪಡಿಸುವುದರಿಂದ ವಿನಾಯತಿ ನೀಡಲಾಗಿದೆ. ಆದರೆ, ಈ ಸಂಸ್ಥೆಯ ಸಿಬ್ಬಂದಿ ಲೈಂಗಿಕ ದೌರ್ಜನ್ಯ,
ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದಲ್ಲಿ ಅದರ ಕುರಿತು ಮಾಹಿತಿ ಬಹಿರಂಗಪಡಿಸಬಹುದಾಗಿದೆ.
ಕೊಳವೆ ಬಾವಿ: ಸುರಕ್ಷತೆಗೆ ಕ್ರಮ
ಹರಿಯಾಣ (ಪಿಟಿಐ): ಇತ್ತೀಚೆಗೆ ಗುಡಗಾಂವ್ ಸಮೀಪದ ಹಳ್ಳಿಯೊಂದರಲ್ಲಿ ತೆರೆದ ಕೊಳವೆಬಾವಿಗೆ ಬಿದ್ದು ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆಯ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರ ಕೊಳವೆ ಬಾವಿ ಕೊರೆಯುವಾಗ ಸುರಕ್ಷತಾ ವಿಧಾನಗಳನ್ನು ಅನುಸರಿಸುವಂತೆ ಕಡ್ಡಾಯವಾಗಿ ನಿಯಮಗಳನ್ನು ರೂಪಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ಕೆ.ಚೌಧರಿ ಅವರು, ಕೊಳವೆಬಾವಿ ಕೊರೆಯುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತ ನಿಯಮಗಳನ್ನು ರೂಪಿಸಲು ಎರಡು ಸಮಿತಿಗಳನ್ನು ರಚಿಸಿದ್ದಾರೆ. ಅವುಗಳಿಗೆ ತಾಂತ್ರಿಕತೆ ಮತ್ತು ಶಾಸನಬದ್ಧ ನಿಯಮಗಳನ್ನು ಒಳಗೊಂಡ ಕರಡನ್ನು ಶೀಘ್ರವೇ ತಯಾರಿಸುವಂತೆ ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.