ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮಾತು ನಿಜಕ್ಕೂ ಸ್ವಾಗತಾರ್ಹ. ಅವರು ತಮ್ಮ ಹೆಸರಿನ ಮುನ್ನ `ಘನತೆವೆತ್ತ~ ಎಂಬ ಸಾಂಪ್ರದಾಯಕ ಶಬ್ದ ಸೇರಿಸುವದು ಬೇಡ. ಶ್ರೀ ಎಂದು ಬರೆದರೆ ಸಾಕು ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ರಾಜಪ್ರಭುತ್ವದ ಬಹುಪರಾಕುಗಳಿಗೆ ಅರ್ಥವಿಲ್ಲ. ಅಳಿಯದೇ ಉಳಿದ ವಸಾಹತುಶಾಹಿ ಪದ್ಧತಿಗಳನ್ನು ಇನ್ನು ಮೇಲಾದರೂ ಕೈ ಬಿಡಬೇಕು. ಹಾಗೆಂದರೆ, ಯಾರನ್ನೂ ಅಗೌರವದಿಂದ ಕಾಣಬೇಕೆಂದಲ್ಲ. ಹೊಗಳುಭಟ್ಟರಾಗುವದನ್ನು ನಿಲ್ಲಿಸಬೇಕು. ಇಲ್ಲದ್ದನ್ನು ಇದೆಯೆಂದು ಬಿಂಬಿಸುವ ಇದ್ದದ್ದನ್ನು ಅನವಶ್ಯಕವಾಗಿ ವಿಸ್ತರಿಸಿ ವಿಜೃಂಭಿಸುವ ಪರಾಕು ಹೇಳುವ ಚಾಳಿ ನಿಲ್ಲಬೇಕು.
ಯಾವ ರಾಜ-ಮಹಾರಾಜರೂ ಈಗ ಇಲ್ಲ. ಪ್ರಭುಗಳು ಪ್ರಜೆಗಳು ಎರಡೂ ನಾವೇ! ಹಳೆಯ ಪಳೆಯುಳಿಕೆಗಳ ಬಳಕೆ ಈಗ ಬೇಡ ಎಂದು, ಅತ್ಯುನ್ನತ ಹುದ್ದೆಯಲ್ಲಿರುವ, ದೇಶದ ಪ್ರಥಮ ಪ್ರಜೆಯಾದ ಮುಖರ್ಜಿಯವರು ಹೇಳಿದ್ದು ನಿಜಕ್ಕೂ ಶ್ಲಾಘನೀಯ.
ಬರೀ ಇಷ್ಟಕ್ಕೇ ಇದು ನಿಲ್ಲಬಾರದು. ಪ್ರಜೆ- ಪ್ರಭು, ಮಾಲಿಕ- ಸೇವಕ, ಅಧಿಕಾರಿ-ಚಪರಾಸಿ, ಮೇಲು- ಕೀಳು ಮುಂತಾದ ತಾರತಮ್ಯಗಳು ತಣ್ಣಗಾಗಬೇಕು. ಸರ್ವಸಮಾನತೆಯತ್ತ ಮುನ್ನಡೆಯಬೇಕು.