ಬೆಂಗಳೂರು: `ತಮ್ಮ ರಾಜಕೀಯ ಸ್ವಾರ್ಥದಲ್ಲಿ ಮುಳುಗಿರುವ ಸರ್ಕಾರವನ್ನು ವಿಸರ್ಜಿಸಬೇಕು~ ಎಂದು ಜನಪರ ಚಿಂತಕ ವೇದಿಕೆ ಕರ್ನಾಟಕವು ಒತ್ತಾಯಿಸಿತು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಮರುಳಸಿದ್ದಪ್ಪ ಅವರು, `ಜಾತಿ ರಾಜಕಾರಣದಿಂದ ಪ್ರಜಾಪ್ರಭುತ್ವಕ್ಕೆ ಕಂಟಕ ಒದಗಲಿದೆ. ಜನ ಬರದ ತೀವ್ರತೆಯಿಂದ ನರಳುತ್ತಿದ್ದಾರೆ. ಕುಡಿಯಲು ನೀರಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದೆ ನರಳುತ್ತಿದ್ದಾರೆ. ಆದರೆ, ಜನ ಪ್ರತಿನಿಧಿಗಳು ಎನಿಸಿಕೊಂಡವರು ತಮ್ಮ ಸ್ವಾರ್ಥ ರಾಜಕೀಯದಲ್ಲಿ ಮುಳುಗಿದ್ದಾರೆ~ ಎಂದು ಆರೋಪಿಸಿದರು.
`ಇಡೀ ಕರ್ನಾಟಕವನ್ನೇ ಎರಡು ಜಾತಿಗಳ ಮಧ್ಯದಲ್ಲಿ ಒಡೆದು ಹಾಕಿದ್ದಾರೆ. ರಾಜ್ಯದ ಪ್ರಗತಿಯ ಕಡೆ ಇವರ ಗಮನವಿಲ್ಲ. ಇರುವುದು ಬರೀ ಕುರ್ಚಿಯ ಕಡೆ ಗಮನ ಮಾತ್ರ. ಹೀಗಾದರೆ, ರಾಜ್ಯವು ಅಧೋಗತಿಯ ಪರಿಸ್ಥಿತಿಗೆ ಬರುವುದು. ಇದರಿಂದ ಸರ್ಕಾರವನ್ನು ಈ ಕೂಡಲೇ ವಿಸರ್ಜಿಸಬೇಕು~ ಎಂದು ಒತ್ತಾಯಿಸಿದರು.
ವಿಮರ್ಶಕ ಪ್ರೊ.ಜಿ.ಕೆ.ಗೋವಿಂದರಾವ್ ಮಾತನಾಡಿ, `ಹೈಕಮಾಂಡಿಗೆ ರಾಜ್ಯದ ಬಗ್ಗೆ ಆಸಕ್ತಿಯಿಲ್ಲ. ಅದರ ಮುಂದಿನ ಗುರಿ 2013 ರ ಚುನಾವಣೆಯಾಗಿದೆ. ಅದಕ್ಕಾಗಿ ಅದು ರಾಜ್ಯ ಸರ್ಕಾರದ ಬಗ್ಗೆ ಯಾವುದೇ ಗಮನವನ್ನು ಹರಿಸುತ್ತಿಲ್ಲ~ ಎಂದರು.