ಮುಂಬೈ (ಪಿಟಿಐ): ಹಕ್ಕಿನ ಷೇರುಗಳ ಮೂಲಕ ಬಂಡವಾಳ ಸಂಗ್ರಹಿಸುವ ಪ್ರಸ್ತಾವಕ್ಕೆ ತ್ವರಿತವಾಗಿ ಅನುಮೋದನೆ ನೀಡಬೇಕು ಎಂದು ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಜಾಗತಿಕ ಮೌಲ್ಯಮಾಪನಾ ಸಂಸ್ಥೆ ಮೂಡಿಸ್, ಬ್ಯಾಂಕ್ನ ಹಣಕಾಸು ಸಾಮರ್ಥ್ಯ ತಗ್ಗಿಸಿರುವುದು, ಬ್ಯಾಂಕ್ಗೆ ಬಂಡವಾಳದ ನೆರವಿನ ಅಗತ್ಯ ಇರುವುದನ್ನು ಎಲ್ಲರಿಗೂ ಮತ್ತೊಮ್ಮೆ ನೆನಪಿಸಿದೆ. ಬ್ಯಾಂಕ್ ಮುಂದಿಟ್ಟಿರುವ ್ಙ 20 ಸಾವಿರ ಕೋಟಿಗಳ ಹಕ್ಕಿನ ಷೇರುಗಳ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ತ್ವರಿತವಾಗಿ ಸ್ಪಂದಿಸಬೇಕು ಎಂದು ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಚೌಧುರಿ ಅಭಿಪ್ರಾಯಪಟ್ಟಿದ್ದಾರೆ.
`ಎಸ್ಬಿಐ~ನಲ್ಲಿ ಕೇಂದ್ರ ಬ್ಯಾಂಕ್ ಶೇ 59ರಷ್ಟು ಪಾಲು ಬಂಡವಾಳ ಹೊಂದಿದೆ. ತನ್ನ ಈ ಬಂಡವಾಳ ಪ್ರಮಾಣ ಕಾಯ್ದುಕೊಳ್ಳಲು ಸರ್ಕಾರ ಹಕ್ಕಿನ ಷೇರುಗಳ ಖರೀದಿಯಲ್ಲಿ ದೊಡ್ಡ ಮೊತ್ತವನ್ನೇ ತೆಗೆದು ಇರಿಸಬೇಕಾಗುತ್ತದೆ.
ಬ್ಯಾಂಕ್ಗೆ ಬೇಕಾಗಿರುವ ಹೆಚ್ಚುವರಿ ಬಂಡವಾಳದ ನೆರವಿನ ಪ್ರಕ್ರಿಯೆಯು ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಇಲ್ಲವೇ 2012ರ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಚೌಧುರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ಯಾಂಕ್ನ ಹಣಕಾಸು ಸಾಮರ್ಥ್ಯ ಇಳಿಸಿರುವುದರ ಕ್ರಮವು ಬ್ಯಾಂಕ್ನ ಮಧ್ಯಂತರ ಸಾಲದ ಮೇಲಿನ ವೆಚ್ಚವನ್ನು ಭಾಗಶಃ ಹೆಚ್ಚಿಸಲಿದೆ ಎಂದೂ ಅವರು ಹೇಳಿದ್ದಾರೆ.