ಕುಶಾಲನಗರ: `ಸರ್ಕಾರ ಆದಿವಾಸಿಗಳು, ದೀನ ದಲಿತರು, ಮೀನುಗಾರಂತಹ ಜನ ಸಮುದಾಯದ ಮೂಲಭೂತ ಹಕ್ಕು ಕಸಿದುಕೊಳ್ಳದಂತೆ ಎಚ್ಚರ ವಹಿಸಬೇಕು ಎಂದು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಹೋರಾಟಗಾರ ಶ್ರೀಧರ್ ಸೋಮವಾರ ತಿಳಿಸಿದರು.
ರಾಷ್ಟ್ರೀಯ ಆದಿವಾಸಿ ಆಂದೋಲನ, ಕುಶಾಲನಗರ ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆ (ಕಾರ್ಡ್), ಕೊಡಗು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಆಶ್ರಯದಲ್ಲಿ ಎಪಿಎಂಸಿ ಪ್ರಾಂಗಣದಲ್ಲಿ ನಡೆಯುತ್ತಿರುವ 4 ದಿನಗಳ ರಾಷ್ಟ್ರೀಯ ಸಮುದಾಯ ಹಕ್ಕುಗಳ ಸಂಗಮ -2011ದಲ್ಲಿ ಮಾತನಾಡಿದ ಅವರು ಸಂಪನ್ಮೂಲಗಳ ಸಂರಕ್ಷಣೆಯ ಜವಾಬ್ದಾರಿಯನ್ನು ನಾವೇ ವಹಿಸಿಕೊಳ್ಳುವಂತಾಗಬೇಕು~ ಎಂದು ಹೇಳಿದರು.
ಸರ್ಕಾರ ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿ ಜನರ ಮೂಲ ನೆಲೆಗಳಿಗೆ ಧಕ್ಕೆಯನ್ನುಂಟು ಮಾಡುತ್ತಿದೆ. ಜನರ ಸಂಪನ್ಮೂಲಗಳಾದ ಭೂಮಿ, ಕಾಡು, ಸಮುದ್ರ, ಜಲ ಸಂಪನ್ಮೂಲಗಳನ್ನು ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಶ್ರೀಮಂತರಿಗೆ ಮಾರಾಟ ಮಾಡುತ್ತಿದೆ ಎಂದು ದೂರಿದರು.
ಕೇರಳದ ಪ್ರೊ.ಮಾಧವನ್, ಡಾ ಕೆ.ಮಕ್ಬೂಲ್, ಕರಾವಳಿ ಜನಸಮುದಾಯ ವೇದಿಕೆಯ ಸಂಚಾಲಕಿ ವಿದ್ಯಾದಿನಕರ್ , ಅಶೋಕ್ ಚೌಧರಿ, `ಡೀಡ್~ ನಿರ್ದೇಶಕ ಎಸ್.ಶ್ರೀಕಾಂತ್ ಮಾತನಾಡಿದರು. ಮುಖಂಡರಾದ ಜೆ.ಕೆ.ರಾಮು, ಆರ್.ಕೆ.ಚಂದ್ರು, ಕುಡಿಯರ ಮುತ್ತಪ್ಪ ಇತರರು ಇದ್ದರು.