ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹಡಗಲಿ ಶೈಕ್ಷಣಿಕ ಜಿಲ್ಲೆಗೆ ಶೀಘ್ರ ಅಂತಿಮ ರೂಪ'

Last Updated 6 ಸೆಪ್ಟೆಂಬರ್ 2013, 5:34 IST
ಅಕ್ಷರ ಗಾತ್ರ

ಹೂವಿನಹಡಗಲಿ: `ಹೂವಿನಹಡಗಲಿ ಕೇಂದ್ರವಾಗಿರಿಸಿಕೊಂಡು ಪ್ರತ್ಯೇಕ ಶೈಕ್ಷಣಿಕ ಜಿಲ್ಲೆ ರಚಿಸುವ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ' ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.

ಪಟ್ಟಣದ ಶಿವಶಾಂತವೀರ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲ್ಲೂಕು ಒಳಗೊಂಡಂತೆ ಹೂವಿನಹಡಗಲಿ ಕೇಂದ್ರವಾಗಿರಿಸಿಕೊಂಡು `ಪ್ರತ್ಯೇಕ ಶೈಕ್ಷಣಿಕ ಜಿಲ್ಲೆ' ರಚನೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಮೊದಲ ಸುತ್ತಿನ ಮಾತುಕತೆ ನಡೆಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ಶೀಘ್ರದಲ್ಲಿಯೇ ಅಂತಿಮ ರೂಪ ಕೊಡಲಿದ್ದೇವೆ ಎಂದರು.

ರಾಜಕೀಯ ಹಸ್ತಕ್ಷೇಪದಿಂದಾಗಿ ಶಿಕ್ಷಣ ಕ್ಷೇತ್ರ ತನ್ನ ಪಾವಿತ್ರ್ಯತೆ ಕಳೆದುಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಸಚಿವರು, ಶಿಕ್ಷಕರಾದವರು ರಾಜಕೀಯ ಪಕ್ಷಗಳ ಮುಖವಾಣಿಯಾಗದೇ ತಮ್ಮ ವೃತ್ತಿಗೌರವವನ್ನು ಎತ್ತಿ ಹಿಡಿಯಬೇಕೆಂದು ಸಲಹೆ ನೀಡಿದರು.

ಶಾಸಕ ಎಂ.ಪಿ.ರವೀಂದ್ರ ಮಾತನಾಡಿ, ಸರ್ಕಾರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಶಿಕ್ಷಕರ ಕೊರತೆ ನೀಗಿಸುವ ಪ್ರಯತ್ನ ಮಾಡುತ್ತಿದೆ. ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ.ಪ್ರಕಾಶರ ಆಶಯದಂತೆ ಶೈಕ್ಷಣಿಕವಾಗಿ ಹಿಂದುಳಿದಿರುವ ಹಡಗಲಿಯನ್ನು ಪ್ರತ್ಯೇಕ ಶೈಕ್ಷಣಿಕ ಜಿಲ್ಲೆಯನ್ನಾಗಿ ಘೋಷಿಸಲು ಸಚಿವರು ಒತ್ತಾಸೆಯಾಗಿ ನಿಲ್ಲಬೇಕು ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ. ವೀರಭದ್ರಪ್ಪ ಉಪನ್ಯಾಸ ನೀಡಿ, `ಒಬ್ಬ ಶ್ರಮಜೀವಿ ರೈತನಿಂದ ಹಿಡಿದು ರಾಷ್ಟ್ರಪತಿ, ಪ್ರಧಾನಿಯಾಗಿ ರೂಪಿಸುವ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ ವಿಶ್ವವಿದ್ಯಾಲಯ ಕುಲಪತಿಗೆ ಸಮನಾದದ್ದು. ನಿರಂತರ ಅಧ್ಯಯನದ ಮೂಲಕ ಮೊದಲು ವಿದ್ಯಾರ್ಥಿಯಾಗಿ ಆಮೇಲೆ ಶಿಕ್ಷಕನಾಗಬೇಕು ಎಂದು ಹೇಳಿದರು.

`ಟೀಚರ್' ಬ್ರಾಂಡ್ ಹೆಸರಿನಲ್ಲಿ ಮದ್ಯ ಉತ್ಪಾದಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ ಅವರು, ಕೆಲ ಘಟನಾವಳಿಗಳಲ್ಲಿ ಮಾಧ್ಯಮಗಳು ಶಿಕ್ಷಕರ ಮೇಲೆ ನೈತಿಕ ಉಪಟಳ ನಡೆಸುತ್ತಿರುವುದು ಅಪಾಯಕಾರ ಬೆಳವಣಿಗೆ ಎಂದರು. ಸಾನಿಧ್ಯ ವಹಿಸಿದ್ದ ಗವಿಮಠದ ಹಿರಿಶಾಂತವೀರ ಸ್ವಾಮೀಜಿ  ಆಶೀರ್ವಚನ ನೀಡಿದರು.

ಪ್ರಾಥಮಿಕ ಶಾಲಾ ವಿಭಾಗದಿಂದ ಜೆ.ಎಂ. ಕೊಟ್ರೇಶ, ಬಿ.ಎಸ್. ನಾಗರಾಜ, ಕೆ.ಹಾಲಪ್ಪ, ಎಸ್.ಎಸ್. ವೀರೇಶ್, ಕೆ.ಅಂಜಿನವ್ವ, ಟಿ.ಜಂಬಣ್ಣ, ನಾಗಪ್ಪ ದೇವರಮನಿ, ಎಚ್.ಎಂ. ಪ್ರಕಾಶ್ ಮತ್ತು  ಪ್ರೌಢಶಾಲಾ ವಿಭಾಗದಿಂದ  ಟಿ.ಮಲ್ಲಮ್ಮ, ಕೆ.ರಾಜಶೇಖರ, ಎಚ್.ಎಂ. ಕೊಟ್ರದೇವರು, ಬಿ.ರಾಜಾಖಾನ್, ಬಿ.ವೆಂಕಟೇಶ್ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ  ಜಿ.ಪಂ. ಹಂಗಾಮಿ ಅಧ್ಯಕ್ಷೆ ಮಮತಾ ಸುರೇಶ್, ತಾ.ಪಂ. ಅಧ್ಯಕ್ಷೆ ದುರುಗಮ್ಮ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಡಿಡಿಪಿಐ ನಾರಾಯಣಗೌಡ, ಮುಖಂಡರಾದ ಐಗೋಳ ಚಿದಾನಂದ, ಎಂ.ಪರಮೇಶ್ವರಪ್ಪ, ಅರವಳ್ಳಿ ವೀರಣ್ಣ, ಅಟವಾಳಗಿ ಕೊಟ್ರೇಶ್, ಜ್ಯೋತಿ ಮಲ್ಲಣ್ಣ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಪಿ. ವೀರೇಶ್, ತಾಲ್ಲೂಕು ಅಧ್ಯಕ್ಷ ಎ.ಕೊಟ್ರಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುಕ್ತಿಹಾರ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮಶೀಲ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಪಿ. ವೀರೇಂದ್ರ, ತಾ.ಪಂ. ಸದಸ್ಯರಾದ ಉಮೇಶ್, ಭಾರತಿ ಬೆಲ್ಲದ, ಜಿಲ್ಲಾ ಶಿಕ್ಷಕರ ಸಂಘದ ಸಿ. ನಿಂಗಪ್ಪ, ಡಾ.ಕೆ. ಹನುಮಂತಪ್ಪ, ಕಷ್ಣನಾಯ್ಕ ಇತರರು ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ್ ಸ್ವಾಗತಿಸಿದರು. ಶಿಕ್ಷಕರಾದ ಕೊಟ್ರಯ್ಯ, ಕಂಠಿ ಪ್ರಕಾಶ್ ನಿರೂಪಿಸಿದರು.

`ಮಕ್ಕಳಲ್ಲಿ ಸಾಂಸ್ಕೃತಿಕ ಚಿಂತನೆ ಬೆಳೆಸಿ'
ಕೂಡ್ಲಿಗಿ: `ಪಠ್ಯಗಳಾಚಿನ ಸಾಂಸ್ಕೃತಿಕ ಚಿಂತನೆಗಳ ಹೊರತಾಗಿ ಶಿಕ್ಷಕನು ತಾನು ಬೆಳೆಯುವುದಿಲ್ಲ, ಮಕ್ಕಳನ್ನು ಬೆಳೆಸಲು ಸಾಧ್ಯವಿಲ್ಲ' ಎಂದು ಖ್ಯಾತ ಜಾನಪದ ವಿದ್ವಾಂಸ ಡಾ.ಶ್ರೀರಾಮ ಇಟ್ಟಣ್ಣವರ್ ಹೇಳಿದರು.

ಅವರು ಗುರುವಾರ ಪಟ್ಟಣದ ಮೇನ್ ಬಾಯ್ಸ ಶಾಲೆಯ ಚಂದ್ರಶೇಖರ್ ಆಜಾದ್ ರಂಗಮಂದಿರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ, ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘ ಹಾಗೂ ಇತರ ಶಿಕ್ಷಕರ ಸಂಘಗಳ ಆಶ್ರಯದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.

ಮಕ್ಕಳಲ್ಲಿ ಸಾಂಸ್ಕೃತಿಕ ಚಿಂತನೆಯನ್ನು ಬೆಳೆಸಬೇಕಾಗಿದೆ, ಬದಕನ್ನು ಪ್ರೀತಿಸುವ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು. ಶಿಕ್ಷಕರು ಮಕ್ಕಳಿಗೆ ಬೇಕಾಗಿದ್ದನ್ನು ಎಲ್ಲವನ್ನು ಕಲಿಸುತ್ತಾರೆ, ಆದರೆ ಶಿಕ್ಷಕರು ಅವರ ಉನ್ನತಿಯನ್ನು ಬಿಟ್ಟು ಅವರಿಂದ ಬೇರೆ ಏನನ್ನು ನಿರೀಕ್ಷೆ ಮಾಡುವುದಿಲ್ಲ, ಇದು ಶಿಕ್ಷಕರ ಮಹಾನ್ ಗುಣವಾಗಿದೆ ಎಂದರು.

ಸಾಹಿತಿ ಡಾ.ವೆಂಕಟಗಿರಿ ದಳವಾಯಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಪಿ.ಚನ್ನಬಸವನಗೌಡ ಅಧ್ಯಕ್ಷತೆ ವಹಿಸಿದ್ದರು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮಂಗಳಮ್ಮ ಚಿನ್ನಾಪ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು, ಕ್ಷೇತ್ರ ಸಮನ್ವಯಾಧಿಕಾರಿ ಮೈಲೇಶ್ ಬೇವೂರ್ ವರದಿ ವಾಚನ ಮಾಡಿದರು.

ತಾ.ಪಂ.ಉಪಾಧ್ಯಕ್ಷ ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಬೆಣ್ಣಿ ಕೊಟ್ರೇಶ್, ಇಒ ಸೈಯದ ಹಜರತ್ ಷಾ, ಸದಸ್ಯರಾದ ಬಸವರಾಜ, ವಿಶಾಲಾಕ್ಷಿ ರಾಜಣ್ಣ, ಪ.ಪಂ. ಸದಸ್ಯರಾದ ಡಿ.ಎಚ್. ದುರುಗೇಶ್, ಗುಪ್ಪಾಲ್ ರಾಘವೇಂದ್ರ, ಜಿಲ್ಲಾ ಸಹ ಕಾರ್ಯದರ್ಶಿ ಕೆ.ಜಿನಾಬಿ, ಎಂ.ಎಂ. ಚನ್ನಯ್ಯ, ರಾಸನೌ ಸಂಘದ ಅಧ್ಯಕ್ಷ ಪಿ.ವಿ. ಕೊತ್ಲಪ್ಪ, ಪ್ರೌ.ಶಾ.ಸ.ಶಿ ಸಂಘದ ಅಧ್ಯಕ್ಷ ಎಸ್. ಶ್ರೀಧರ, ಕರಾಪ್ರಾಶಿ ಸಂಘದ ರಾಜ್ಯ ಪ್ರತಿನಿಧಿ ಎಸ್.ಮರುಳಸಿದ್ದಪ್ಪ, ಹಾಲೇಶ್, ಬಿ.ಮಾರೇಶ್, ಪಂಪಾಪತಿ, ಎಚ್.ಬಸಪ್ಪ, ಪಿ.ನಾಗರಾಜ, ಪಿ.ಶಿವರಾಜ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ಎಂ. ವೀರಯ್ಯ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT