ಶಿರಾ: ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲು- ಮೊಟ್ಟೆ ಕೊಡುವ ಜವಾಬ್ದಾರಿಯನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ವಹಿಸಲಾಗಿದೆ. ಅದಕ್ಕೆ ಸಂಬಂಧಿಸಿದ ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಸಿಐಟಿಯು ನೇತೃತ್ವದ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸಂಘ ಆಗ್ರಹಿಸಿದೆ.
ದೊಡ್ಡ ಪ್ರಮಾಣದಲ್ಲಿ ಅಪೌಷ್ಟಿಕತೆ ಇದ್ದರೂ ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕವಾಗಿ ಆಹಾರ ವಿತರಣೆ ಮಾಡುತ್ತಿಲ್ಲ ಎಂದು ಶನಿವಾರ ತಹಶೀಲ್ದಾರ್ ನಾಗಹನುಮಯ್ಯ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ದೂರಿದ್ದಾರೆ.
ಮಕ್ಕಳಿಗೆ ಹಾಲುಣಿಸುವ ತಾಯಂದಿರಿಗೆ ಹಾಗೂ ಬಾಣಂತಿಯರಿಗೆ ಖಾತರಿ ಸೇವಾ ಯೋಜನೆಯನ್ನು ಜಾರಿಗೆ ತಂದಿದ್ದು, ಇದು ಇಲ್ಲಿಯವರೆಗೂ ಜಾರಿಯಾಗದೆ ಕೇವಲ ಯೋಜನೆಯಾಗಿಯೇ ಉಳಿದಿದೆ ಎಂದು ದೂರಿರುವ ಸಂಘದ ಪದಾಧಿಕಾರಿಗಳು, ಸಮಗ್ರ ಶಿಶು ಕಲ್ಯಾಣ ಯೋಜನೆಯ ಪ್ರಮುಖ
ಕಾರ್ಯಕ್ಷೇತ್ರಗಳಾದ ಆಹಾರ ಸರಬರಾಜು, ಶಾಲಾ ಪೂರ್ವ ಶಿಕ್ಷಣ ಹಾಗೂ ಅಂಗನವಾಡಿ ಕೇಂದ್ರಗಳ ನಿರ್ವಹಣೆಯನ್ನು ಖಾಸಗಿ ಅಥವಾ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸದೆ ಸರ್ಕಾರವೇ ನಿರ್ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಟಿ.ಎಂ.ಮಂಜುಳ, ಉಪಾಧ್ಯಕ್ಷೆ ಮಹಾದೇವಮ್ಮ, ಕಾರ್ಯದರ್ಶಿ ನಾಗರತ್ನ, ಮುಖಂಡರಾದ ರತ್ನಮ್ಮ, ಕಾಳಪುರದ ಕಮಲ, ಪಂಜಿಗಾನಹಳ್ಳಿ ಶಾರದ, ಮುದ್ದೇನಹಳ್ಳಿ ಕಮಲ, ಹುಳಿಗೆರೆ ಅನ್ನಪೂರ್ಣ ಮತ್ತಿತರರು ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಾಜರಿದ್ದರು.