ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿಗವನವೂ ಪರಿಣಾಮಕಾರಿ: ಕಂಬಾರ

Last Updated 1 ಸೆಪ್ಟೆಂಬರ್ 2013, 20:16 IST
ಅಕ್ಷರ ಗಾತ್ರ

ಬೆಂಗಳೂರು:  `ಪದ್ಯವು ಭಾಷೆಯ ಪರಿಶುದ್ಧವಾದ ರೂಪ. ಸಹೃದಯರಿಗೆ ರಸಾನುಭವವನ್ನು ನೀಡುವುದೇ ಸುಮಧುರ ಕಾವ್ಯವಾಗಿದೆ' ಎಂದು ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.

ಸ್ನೇಹ ಬುಕ್ ಹೌಸ್ ಮತ್ತು ಶುಭದ ಪ್ರಕಾಶನವು ನಗರದ ಯವನಿಕ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜರಗನಹಳ್ಳಿ ಶಿವಶಂಕರ್ ಅವರ `ವಚನ ಧ್ಯಾನ', `ಹೊಳೆ', `ಚಾತಕ' ಪುಸ್ತಕಗಳನ್ನು  ಬಿಡುಗಡೆ ಮಾಡಿ ಅವರು ಮಾತನಾಡಿದರು.

`ದೀರ್ಘ ಪದ್ಯಗಳು ಮಾತ್ರ ಗಾಢವಾದ ಅರ್ಥವನ್ನು ನೀಡುತ್ತವೆ ಎಂದು ಹೇಳಲು ಬರುವುದಿಲ್ಲ. ಹನಿಗವನಗಳು ಕೂಡ ದೀರ್ಘ ಪದ್ಯಗಳಂತೆ ಪರಿಣಾಮಕಾರಿಯಾಗಿವೆ. ಸರ್ವಜ್ಞ, ಡಿವಿಜಿ ಮತ್ತು ದಿನಕರ ದೇಸಾಯಿ ಅವರ ಹನಿಗವನಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ' ಎಂದರು.

`ಮನರಂಜನೆ, ವಿಡಂಬನೆಯು ಹನಿಗವನಗಳಲ್ಲಿ ಇರುವುದು ಸಾಮಾನ್ಯ. ಆದರೆ, ಜರಗನಹಳ್ಳಿ ಅವರ ಹನಿಗವಿತೆಗಳು ಇವೆರೆಡಕ್ಕಿಂತ ವಿಭಿನ್ನ ಮಾದರಿಯಲ್ಲಿವೆ. ಬದುಕಿನ ತೀವ್ರವಾದ ಗಾಢತೆಯನ್ನು, ಗಂಭೀರವಾದ ಚಿಂತನೆಯನ್ನು ಬೆರೆಸಿ ಹನಿಗವನಗಳನ್ನು ನಮ್ಮ ಮುಂದಿಟ್ಟಿದ್ದಾರೆ' ಎಂದು ಮೆಚ್ಚುಗೆ ಸೂಚಿಸಿದರು.

ಲೇಖಕ ಎಚ್.ಎಸ್.ವೆಂಕಟೇಶಮೂರ್ತಿ, `ಕವಿತೆಗಳು ಮಡಿಕೆಗಟ್ಟಬೇಕು, ನೆರಿಗೆಯಾಗಬೇಕು ಆಗ ಸುಂದರವಾಗಿರುತ್ತವೆ. ದೀರ್ಘವಾದ ಪದ್ಯದಲ್ಲಿ ನಮ್ಮನ್ನು ಹಿಡಿದು ನಿಲ್ಲಿಸುವಂತಹ ಎರಡು ಸಾಲುಗಳೇ ಹನಿಗವನಗಳು' ಎಂದರು.

`ಜರಗನಹಳ್ಳಿ ಅವರು ಹನಿಗವಿತೆಗಳಲ್ಲಿ ವಾಸ್ತವ ಅಂಶಗಳನ್ನು ಮನತಟ್ಟುವಂತೆ ಹೇಳಿದ್ದಾರೆ. ಅವರ ಹನಿಗವಿತೆಯೊಂದರಲ್ಲಿ `ಆವಗೆಯಲ್ಲಿ ಬೆಂದ ಮಡಕೆಗೆ, ಮನೆಯ ಒಲೆಯಲ್ಲಿಯೂ ಬೇಯುವುದು ತಪ್ಪಲಿಲ್ಲ' ಎಂಬಲ್ಲಿ ಹೆಣ್ಣಿನ ಶೋಷಣೆ ಬವಣೆಯನ್ನು ಸದ್ದಿಲ್ಲದೆ ನಮ್ಮ ಮುಂದೆ ತೆರೆದು ಇಡುತ್ತಾರೆ' ಎಂದು ಅವರು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT