ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಹಲಕುರ್ಕಿ ಗ್ರಾಮದಲ್ಲಿ ಸದ್ಗುರು ಶ್ರೀ ದಿಗಂಬರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
ಗ್ರಾಮದ ಶ್ರೀ ದಿಗಂಬರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ 33 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನೂತನ ವಧು-ವರರಿಗೆ ಸರ್ಕಾರದಿಂದ ಆದರ್ಶ ವಿವಾಹ ಯೋಜನೆಯಡಿ ತಲಾ ರೂ.10 ಸಾವಿರ ಪ್ರೋತ್ಸಾಹಧನ ವಿತರಿಸಿ ಮಾತನಾಡಿದ ಸಚಿವ ಮುರುಗೇಶ ನಿರಾಣಿ, ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದಾಗಿದೆ ಎಂದರು.
ಆರ್ಥಿಕವಾಗಿ ಕಡುಬಡವರು ಸಾಲ ಮಾಡಿ ಮದುವೆ ಮಾಡುವುದನ್ನು ತಪ್ಪಿಸಲು ಉಚಿತ ಸಾಮೂಹಿಕ ವಿವಾಹದಿಂದ ಸಹಾಯವಾಗಲಿದೆ ಎಂದು ಹೇಳಿದರು. ಹಲಕುರ್ಕಿಯ ಸಮಗ್ರ ಅಭಿವೃದ್ಧಿ ಉದ್ದೇಶದಿಂದ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಗೆ ಸೇರ್ಪಡೆ ಮಾಡುವುದಾಗಿ ತಿಳಿಸಿದರು.
ಗ್ರಾಮಕ್ಕೆ ಅಗತ್ಯವಿರುವ ಕುಡಿಯುವ ನೀರು, ರಸ್ತೆ, ಬಸ್ ನಿಲ್ದಾಣ ನಿರ್ಮಾಣಕ್ಕೆ ಆದ್ಯತೆ ನೀಡಲಾಗು ವುದು, ಮನೆ ರಹಿತರಿಗೆ ಮನೆ ನಿರ್ಮಿಸಿಕೊಡಲಾ ಗುವುದು ಎಂದರು.
ವಿಧಾನ ಪರಿಷತ್ನ ಉಪನಾಯಕ ಎಸ್.ಆರ್. ಪಾಟೀಲ ಮಾತನಾಡಿ, ಆರ್ಥಿಕ ಹೊರೆ ಇಲ್ಲದಂತೆ ಬಡವರು ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಿ ತಮ್ಮ ಮಕ್ಕಳನ್ನು ಮದುವೆ ಮಾಡಲು ಸಾಮೂಹಿಕ ವಿವಾಹ ಸಹಾಯಕವಾಗಿದೆ ಎಂದು ಹೇಳಿದರು.
ಹತ್ತಾರು ವರ್ಷದಿಂದ ಶ್ರೀ ದಿಗಂಬರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಸಿಕೊಂಡು ಬರುತ್ತಿ ರುವ ಉಚಿತ ಸಾಮೂಹಿಕ ವಿವಾಹ ಬಡವರ ಪಾಲಿಗೆ ವರದಾನವಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ದಿಗಂಬರೇಶ್ವರ ಮಠದ ಷಡಕ್ಷರ ಮಹಾಸ್ವಾಮಿ, ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಬಿ.ಪಿ. ಹಳ್ಳೂರ, ಮಹಾಂತೇಶ ಮಮದಾಪುರ, ಜಿ.ಪಂ. ಸದಸ್ಯ ಎಂ.ಜಿ. ಕಿತ್ತಲಿ, ನಾಗಪ್ಪ ಹುಲ್ಲಿಕೇರಿ, ಎಂ.ಬಿ. ಹಂಗರಗಿ, ರಂಗಪ್ಪ ಬಂಡಿವಡ್ಡರ, ಎಂ.ಎಂ.ಹಂಪಣ್ಣ ವರ, ತಹ ಸೀಲ್ದಾರ್ ಮಹೇಶ ಕರ್ಜಗಿ, ಮುತ್ತು ನಾಯ್ಕರ್, ಶಾಂತಾದೇವಿ ಪಟ್ಟಣಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.