ಬೆಂಗಳೂರು: ಕುಶ್ ತಂದಿತ್ತ ಎರಡು ಗೋಲುಗಳ ನೆರವಿನಿಂದ ಡಿವೈಎಸ್ಎಸ್ ತಂಡದವರು ಇಲ್ಲಿ ನಡೆಯುತ್ತಿರುವ ಡಿ.ಎಸ್. ಮೂರ್ತಿ ಮತ್ತು ವಿ. ಕರುಣಾಕರನ್ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿಯಯಲ್ಲಿ ಭರ್ಜರಿ ಗೆಲುವು ದಾಖಲಿಸಿದರು.
ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಡಿವೈಎಸ್ಎಸ್ 6-0 ಗೋಲುಗಳಿಂದ ಎಬಿಎಚ್ಎ ತಂಡವನ್ನು ಪರಾಭವಗೊಳಿಸಿತು. ಮಿಂಚಿನ ಆಟವಾಡಿದ ಕುಶ್ 39 ಹಾಗೂ 44ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ವಿರಾಮದ ವೇಳೆಗೆ 3-0 ಮುನ್ನಡೆ ಸಾಧಿಸಿದ್ದ ವಿಜಯ ತಂಡದ ಪರ ಇನ್ನಿತರ ಗೋಲುಗಳನ್ನು ಸಚಿನ್ ಮಲಾಡ್ (8ನೇ ನಿ.), ಆಶಿರ್ (21ನೇ ನಿ.), ಚೆಂಗಪ್ಪ (33ನೇ.), ಶೇಶೇಗೌಡ (47ನೇ ನಿ.) ಗಳಿಸಿದರು.
ಎಚ್ಎಎಸ್ಸಿ ತಂಡದವರು 2-0 ಗೋಲುಗಳಿಂದ ಪಿಸಿಟಿಸಿ ತಂಡವನ್ನು ಮಣಿಸಿದರು. ವಿಜಯಿ ತಂಡದ ಮೊಹಮ್ಮದ್ ನಯಿಮುದ್ದೀನ್(29ನೇ ನಿ.) ಹಾಗೂ ಅಭಿನವ್ ಗಣಪತಿ (55ನೇ ನಿ.) ಗೋಲು ತಂದಿತ್ತರು.