ನೆಲಮಂಗಲ: ‘ಸುಮಾರು 55 ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಿ ಹಿಂದುಳಿದ ಜಾತಿಗಳ ಒಕ್ಕೂಟವನ್ನು ಕಟ್ಟಲಾಗಿದೆ. ಮೀಸಲಾತಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಒಕ್ಕೂಟ ಹೋರಾಡುತ್ತಿದೆ’ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.
ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮಾದಾವರದಲ್ಲಿ ಭಾನುವಾರ ಹಮ್ಮಿಕೊಂಡಿರುವ ದಶಮಾನೋತ್ಸವ ಸಮಾರಂಭದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು. ‘ಅಹಿಂದ ವರ್ಗಗಳ ಸಮಾವೇಶವನ್ನು ದೊಡ್ಡಮಟ್ಟದಲ್ಲಿ ಆಯೋಜಿಸಲು ಎಲ್ಲ ತಯಾರಿ ನಡೆಸಲಾಗಿದೆ’ ಎಂದರು.
ಒಕ್ಕೂಟದ ಅಧ್ಯಕ್ಷ ಎಸ್.ಸಿದ್ದಗಂಗಯ್ಯ ಮಾತನಾಡಿ , ‘ಅತಿ ಸಣ್ಣ ವರ್ಗಗಳನ್ನು ಒಗ್ಗೂಡಿಸಿ ಅವರ ಕುಲಕಸುಬುಗಳಿಗೆ ಪುನಶ್ಚೇತನ ನೀಡುವ ಕಾರ್ಯಕ್ಕೆ ಸಮಾವೇಶದ ಮೂಲಕ ಚಾಲನೆ ನೀಡಲಾಗುವುದು’ ಎಂದರು.
ಒಕ್ಕೂಟದ ಉಪಾಧ್ಯಕ್ಷ ಸುರೇಶ್ ಎಂ.ಲಾತೂರ್, ‘ಸುಮಾರು 5 ಲಕ್ಷ ಜನರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 2 ಲಕ್ಷ ಜನಕ್ಕೆ ಆಸನ ವ್ಯವಸ್ಥೆ ಮಾಡಲಾಗುವುದು. ವಸತಿ ಮತ್ತು ಊಟದವ್ಯವಸ್ಥೆ ಮಾಡಲಾಗುವುದು’ ಎಂದರು.
ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಗೌರವ ಅಧ್ಯಕ್ಷ ಎನ್.ವಿ. ನರಸಿಂಹಯ್ಯ, ಕಾರ್ಯಾಧ್ಯಕ್ಷ ಡಾ.ಬಿ.ಕೆ. ರವಿ, ಪ್ರಧಾನ ಕಾರ್ಯದರ್ಶಿ ಎಸ್.ಜಿ.ಕಾಳೇಗೌಡ, ಪುರಸಭಾ ಸದಸ್ಯ ಶಿವಕುಮಾರ್ ಇದ್ದರು.