ಉಪ್ಪಿನಂಗಡಿ: ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವ ಮುಗಿದು ಹೋಗುವ ಸಮಯದಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ, ಪರಸ್ಪರ ಕಲ್ಲು ತೂರಾಟ ನಡೆದು ಸಬ್ ಇನ್ಸ್ಪೆಕ್ಟರ್ ಸಹಿತ ಐವರು ಗಾಯಗೊಂಡಿದ್ದಾರೆ.
ಎರಡೂ ಗುಂಪುಗಳಿಂದ ಕಲ್ಲು ತೂರಾಟ ನಡೆದಿದ್ದು, ಸುಬ್ರಹ್ಮಣ್ಯ ಸಬ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ಅವರ ಕಣ್ಣಿನ ಭಾಗಕ್ಕೆ ಗಾಯವಾಗಿದೆ. ಉಳಿದಂತೆ ಗಣೇಶ್, ಸುರೇಶ್, ಕೇಶವ, ಮುಸ್ತಫಾ ಎಂಬುವವರು ಗಾಯಗೊಂಡಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಸಮಾಜೋತ್ಸವ ಮುಗಿದು ಹೋಗುತ್ತಿದ್ದಾಗ ಒಂದು ಗುಂಪು ಮಸೀದಿ ಬಳಿ ತಲುಪಿದಾಗ ಘೋಷಣೆ ಕೂಗಲಾರಂಭಿಸಿತು. ಇದರಿಂದ ಕ್ರೋಧಗೊಂಡ ಇನ್ನೊಂದು ಗುಂಪು ವಿರುದ್ಧ ಘೋಷಣೆ ಕೂಗಲಾರಂಭಿಸಿತು.
ಅಷ್ಟರಲ್ಲಿ ಘರ್ಷಣೆ ಆರಂಭವಾಗಿ ಉಪ್ಪಿನಂಗಡಿ ಪೇಟೆಯ ತುಂಬ ಎರಡೂ ಧರ್ಮದ ಜನ ಜಮಾಯಿಸತೊಡಗಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಪೊಲೀಸರು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದರು.