ನಾರಾಯಣಪುರ ಜಲಾಶಯ ನೂರಾರು ಹಳ್ಳಿಗಳ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ನುಂಗಿ ಹಾಕಿದ್ದು ಈಗ ಇತಿಹಾಸ. ಬೇಸಿಗೆಯಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾದಂತೆಲ್ಲ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಧನ್ನೂರ, ಅಡಿಹಾಳ, ಎಮ್ಮೆಟ್ಟಿ, ಹುಲ್ಲಳ್ಳಿ, ಕೂಡಲಸಂಗಮದ ನೂರಾರು ರೈತರು ಜಲಾಶಯದ ಹಿನ್ನೀರಿನ ತೇವಾಂಶ ಬಳಸಿಕೊಂಡು ಅಲ್ಪಾವಧಿ ಬೆಳೆಗಳನ್ನು ಬೆಳೆಯುತ್ತಾರೆ.
ಫೆಬ್ರುವರಿ ತಿಂಗಳಿನಿಂದ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತ ಹೋದಂತೆ ಹಿನ್ನೀರು ಪ್ರದೇಶ ತೆರವಾಗುತ್ತ ಹೋಗುತ್ತದೆ. ಈ ತೆರವಾದ ಭೂಮಿಯಲ್ಲಿ ರೈತರು ಸೌತೆ, ಮೆಕ್ಕೆ ಜೋಳ, ಕರಬೂಜ, ಹೀರೆ, ಬೆಂಡೆ, ಚವಳಿ, ಪಾಲಕ, ಪುಂಡಿ ಬೀಜ ಬಿತ್ತನೆಗೆ ಸಜ್ಜಾಗುತ್ತಾರೆ. ವರ್ಷವಿಡೀ ನೀರುಂಡ ಹಸಿ ಮಣ್ಣಲ್ಲಿ ಬಿತ್ತನೆ ಮಾಡುತ್ತಾರೆ.