ಬೆಂಗಳೂರು: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ವಿಜಯಾನಂದ ಹೊಸಕೋಟೆ ಅವರ ನೇತೃತ್ವದ ಸಮಿತಿಯು ಬಿಬಿಎಂಪಿಯ ಮೇಯರ್ ಶಾರದಮ್ಮ ಅವರನ್ನು ಸೋಮವಾರ ಭೇಟಿ ಮಾಡಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯಿತು.
ಬೆಂಗಳೂರಿನಲ್ಲಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು, ಸಂಚಾರ ವ್ಯವಸ್ಥೆ, ನಕ್ಷೆ ಮಂಜೂರಾತಿ ಪದ್ಧತಿ ಮುಂತಾದ ವಿಷಯಗಳ ಬಗ್ಗೆ ಅವರು ಮಾಹಿತಿ ಪಡೆದರು. ವಸತಿ ಮತ್ತು ವಸತಿಯೇತರ ಕಟ್ಟಡಗಳ ನಕ್ಷೆ ಮಂಜೂರಾತಿ ಮಾಡುವಾಗ ಅನುಸರಿಸಬೇಕಾದ ಕ್ರಮಗಳು, ಪರವಾನಗಿ ಶುಲ್ಕ ಮತ್ತು ಆನ್ಲೈನ್ನಲ್ಲಿ ನಕ್ಷೆ ಮಂಜೂರಾತಿ ಮಾಡುವ ಬಗ್ಗೆ ಅವರು ಚರ್ಚೆ ನಡೆಸಿದರು.
`ಪಾಲಿಕೆಯಲ್ಲಿ ಸುವರ್ಣ ಪರವಾನಿಗೆ ಪದ್ಧತಿ ಜಾರಿಗೆ ತರಲಾಗಿದೆ. ಈ ಯೋಜನೆಯಡಿ 30/40 ಮತ್ತು 60/40 ನಿವೇಶನಗಳನ್ನು ಹೊಂದಿದ ಆಸ್ತಿ ಮಾಲೀಕರಿಗೆ ನಕ್ಷೆ ಮಂಜೂರು ಮಾಡಿಕೊಡಲಾಗುತ್ತಿದೆ. ಬಹುಮಹಡಿ ಮತ್ತು ವಾಣಿಜ್ಯ ಸಂಕೀರ್ಣಗಳಿಗೆ ಆನ್ಲೈನ್ ಮುಖಾಂತರ ನಕ್ಷೆ ಮಂಜೂರು ಮಾಡಲಾಗುತ್ತಿದೆ~ ಎಂದು ಶಾರದಮ್ಮ ಹೇಳಿದರು.
`ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರುವ ಉದ್ದೇಶದಿಂದ ಇಲ್ಲಿಗೆ ಬಂದು ಮಾಹಿತಿ ಪಡೆಯಲಾಯಿತು~ ಎಂದು ವಿಜಯಲಕ್ಷ್ಮಿ ಹೇಳಿದರು.