ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರುವ ಹೂಡಿಕೆದಾರರಿಗೆ ತಕ್ಷಣವೇ ಒದಗಿಸಲು 28,000 ಎಕರೆ ಭೂಮಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಬಳಿ ಲಭ್ಯವಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಕಾಂಗ್ರೆಸ್ನ ಟಿ.ಬಿ.ಜಯಚಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಐಎಡಿಬಿ ಮೂಲಕ ಭೂ ಬ್ಯಾಂಕ್ ಸ್ಥಾಪಿಸಲು 1.20 ಲಕ್ಷ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಪ್ರಕಟಿಸಲಾಗಿತ್ತು. ಈ ಪೈಕಿ 85,000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದೆ. 28,000 ಎಕರೆ ಈಗಾಗಲೇ ಮಂಡಳಿ ಬಳಿ ಇದ್ದು, ಹೂಡಿಕೆದಾರರಿಗೆ 24 ಗಂಟೆಗಳೊಳಗೆ ಒದಗಿಸಲಾಗುವುದು~ ಎಂದರು.
ಜೂನ್ನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 2.81 ಲಕ್ಷ ಕೋಟಿ ರೂಪಾಯಿ ಹೂಡಿಕೆ ಉದ್ದೇಶದ 246 ಒಪ್ಪಂದಗಳಿಗೆ ಸಹಿಯಾಗಿದೆ. 3.61 ಲಕ್ಷ ಕೋಟಿ ರೂಪಾಯಿ ಹೂಡಿಕೆಗೆ ಆಸಕ್ತಿ ವ್ಯಕ್ತವಾಗಿದ್ದು, ಈ ಸಂಬಂಧ 415 ಒಪ್ಪಂದಗಳಾಗಿವೆ. ರೂ 35,495 ಕೋಟಿ ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸಿ 90 ಹೂಡಿಕೆದಾರರು ನೋಂದಣಿ ಮಾಡಿಸಿಕೊಂಡಿದ್ದಾರೆ.
ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಮೂಲಕ 15,072 ಕೋಟಿ ರೂಪಾಯಿ ಮೊತ್ತದ 64 ಒಪ್ಪಂದಗಳಾಗಿವೆ. ಜಿಲ್ಲಾ ಮಟ್ಟದಲ್ಲಿ 27,292 ಕೋಟಿ ರೂಪಾಯಿ ಹೂಡಿಕೆಯ 6,742 ಒಪ್ಪಂದಗಳಿಗೆ ಸಹಿ ಮಾಡಲಾಗಿದೆ ಎಂದು ವಿವರಿಸಿದರು.
ಒಟ್ಟು 7,557 ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. 7.20 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮತ್ತು 18.91 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ. 2010ರಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 3.92 ಲಕ್ಷ ಕೋಟಿ ರೂಪಾಯಿ ಮೊತ್ತದ 389 ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. 40 ಯೋಜನೆಗಳು ಅನುಷ್ಠಾನಕ್ಕೆ ಬಂದಿವೆ ಎಂದು ತಿಳಿಸಿದರು.
ರೂ. 34.31 ಕೋಟಿ ವೆಚ್ಚ
ಜೂನ್ ತಿಂಗಳಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಒಟ್ಟು 34.31 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಈಗಾಗಲೇ 16.31 ಕೋಟಿ ರೂ.ಪಾವತಿ ಮಾಡಿದ್ದು, 18 ಕೋಟಿ ರೂ. ಮೊತ್ತದ ಬಿಲ್ಲುಗಳ ಪರಿಶೀಲನೆ ನಡೆಯುತ್ತಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಕಾಂಗ್ರೆಸ್ ಸದಸ್ಯ ರಾಮಲಿಂಗಾರೆಡ್ಡಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, `ಜಾಹೀರಾತು ಮತ್ತು ಪ್ರಚಾರಕ್ಕಾಗಿ 3.53 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.
ಮಾಹಿತಿ ಪತ್ರಗಳ ಮುದ್ರಣಕ್ಕೆ 26.85 ಲಕ್ಷ ರೂ.ವೇದಿಕೆ ನಿರ್ಮಾಣಕ್ಕೆ 14.31 ಲಕ್ಷ ರೂ. ಮಾಧ್ಯಮ ಕೇಂದ್ರ ಮತ್ತು ಕಚೇರಿಗಳ ನಿರ್ಮಾಣಕ್ಕೆ 15 ಲಕ್ಷ ರೂ., ಆಹಾರ ಪೂರೈಕೆಗೆ 50 ಲಕ್ಷ ರೂ. ರೋಡ್ ಷೋಗೆ 5.42 ಕೋಟಿ ರೂ. ಸಲಹಾ ಶುಲ್ಕ 6 ಕೋಟಿ ರೂ. ಪಾವತಿಸಲಾಗಿದೆ~ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.