ಚಾಮರಾಜನಗರ: ‘ವೈಜ್ಞಾನಿಕ ಪದ್ಧತಿ ಅನುಸರಿಸಿ ಹತ್ತಿ ಬಿತ್ತನೆ ಮಾಡಿ ಹೆಚ್ಚಿನ ಇಳುವರಿ ಪಡೆಯಬಹುದು’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸಿ. ದೊರೆಸ್ವಾಮಿ ಹೇಳಿದರು.
ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಿಂದ ಶುಕ್ರವಾರ ಗುಂಡ್ಲುಪೇಟೆ ತಾಲ್ಲೂಕಿನ ತಗ್ಗಲೂರು ಗ್ರಾಮದ ರೈತ ಮಹೇಶ್ಕುಮಾರ್ ಅವರ ಜಮೀನು ಸೇರಿದಂತೆ ಒಟ್ಟು 13 ಎಕರೆ ಪ್ರದೇಶದಲ್ಲಿ ನಡೆದ ‘ಹತ್ತಿಯಲ್ಲಿ ಸಮಗ್ರ ಕೀಟ ನಿರ್ವಹಣೆ’ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಟಿ ಹತ್ತಿಯ ಸಾಧಕ– ಬಾಧಕ ಹಾಗೂ ರೈತರಿಗೆ ಕೂಳೆ ಹತ್ತಿ ಬೆಳೆಯುವುದರಿಂದ ಆಗುವ ಅನಾಹುತ ಕುರಿತು ಮಾಹಿತಿ ನೀಡಿದರು.
ರೈತರು ಕೃಷಿಯಲ್ಲಿ ಯಾವುದೇ ಸಮಸ್ಯೆ ತಲೆದೋರಿದರೆ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬೇಕು. ಅಗತ್ಯ ಮಾರ್ಗದರ್ಶನ ಹಾಗೂ ತರಬೇತಿ ನೀಡಲು ಕೇಂದ್ರ ಬದ್ಧವಾಗಿದೆ ಎಂದರು.
ಕೇಂದ್ರದ ಬೇಸಾಯ ಶಾಸ್ತ್ರ ತಜ್ಞ ಸಿ. ಶಶಿಕುಮಾರ್ ಮಾತನಾಡಿ, ಹತ್ತಿಯಲ್ಲಿ ಸೂಕ್ತ ತಳಿಗಳು, ಬಿತ್ತನೆ ಕಾಲ, ಸಮಗ್ರ ಪೋಷಕಾಂಶ, ನೀರು ಮತ್ತು ಕಳೆ ನಿರ್ವಹಣೆ ಸೇರಿದಂತೆ ವೈಜ್ಞಾನಿಕ ಕೃಷಿ ಪದ್ಧತಿ ಕುರಿತು ರೈತರಿಗೆ ಮನವರಿಕೆ ಮಾಡಿಕೊಟ್ಟರು.
ಸೂಕ್ತ ಅಂತರ ಬೆಳೆ ಆಯ್ಕೆ ಮಾಡಿಕೊಂಡು ಹತ್ತಿ ಬೆಳೆಯುವುದರಿಂದ ಎಕರೆವಾರು ಆದಾಯ ಹೆಚ್ಚಿಸಬಹುದು, ಕಳೆ ಹತೋಟಿಗೆ ತರಬಹುದು ಎಂದರು.
ಕೀಟಶಾಸ್ತ್ರ ತಜ್ಞ ಡಾ.ಶಿವರಾಯ ನಾವಿ ಹತ್ತಿಯಲ್ಲಿ ಸಮಗ್ರ ಕೀಟ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಪ್ರಾತ್ಯಕ್ಷಿಕೆ ಮೂಲಕ ರಾಸಾಯನಿಕ ಕೀಟನಾಶಕ ಬಳಕೆಯನ್ನು ಕಡಿಮೆ ಮಾಡುವ ಕುರಿತು ವಿವರಿಸಿದರು.
ಪ್ರಾತ್ಯಕ್ಷಿಕೆಯಲ್ಲಿ ಹತ್ತಿಯಲ್ಲಿ ರಸಹೀರುವ ಕೀಟಗಳ ನಿರ್ವಹಣೆಗಾಗಿ ಬೀಜೋಪಚಾರ, ಬೆಂಡೆಯನ್ನು ಪ್ರತಿ 20 ಸಾಲಿಗೊಂದು ಬೆಳೆಯುವುದು, ಹಳದಿ ಅಂಟುಬಲೆ ಬಳಸುವುದು (ಎಕರೆಗೆ 10 ರಂತೆ), ಇಮಿಡಾಕ್ಲೋಪ್ರಿಡ್ ಅನ್ನು (1 ಮಿ.ಲಿ. - 20 ಮಿ.ಲಿ. ನೀರಿನಲ್ಲಿ) ಸುಳಿಗೆ ಹಚ್ಚುವುದು, ಬೆಳೆ 80- 90 ದಿನದ ಹಂತದಲ್ಲಿದ್ದಾಗ ಕುಡಿ ಚಿವುಟುವುದು ಮತ್ತು ಫಿಪ್ರೋನಿಲ್ (1 ಮಿ.ಲಿ./ ಲೀಟರ್) ಸಿಂಪಡಿಸುವುದು ಮುಂತಾದ ತಂತ್ರಜ್ಞಾನ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.