ನವದೆಹಲಿ (ಪಿಟಿಐ): ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಕಾರ್ಪೊರೇಟ್ ವಂಚನೆ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಆದರೆ, ಹೆಚ್ಚಿನ ಕಂಪೆನಿಗಳು ಇದನ್ನು ವ್ಯವಹಾರದ ಒಂದು ಭಾಗ ಎಂದು ಒಪ್ಪಿಕೊಂಡು ಬಿಟ್ಟಿವೆ ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆ `ಕೆಪಿಎಂಜಿ' ಹೇಳಿದೆ.
ಕಂಪೆನಿಗಳು ವಂಚನೆ ಪ್ರಕರಣಗಳ ವಿರುದ್ಧ ಮೃದು ಧೋರಣೆ ತಳೆದಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು `ಕೆಪಿಎಂಜಿ' ತನ್ನ `2012ರ ಕಾರ್ಪೊರೇಟ್ ವಂಚನೆ ಪ್ರಕರಣಗಳು' ವರದಿಯಲ್ಲಿ ಹೇಳಿದೆ.
ಕಳೆದ ಎರಡು ವರ್ಷಗಳಲ್ಲಿ ಕಾರ್ಪೊರೇಟ್ ವಂಚನೆ ಪ್ರಕರಣಗಳ ಸಂಖ್ಯೆ ಶೇ 45ರಷ್ಟು ಹೆಚ್ಚಿದೆ. ಆದರೆ, ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 70ರಷ್ಟು ಕಂಪೆನಿಗಳ ಪ್ರತಿನಿಧಿಗಳು ವ್ಯವಹಾರದಲ್ಲಿ ಇದು ಸಾಮಾನ್ಯ ಎಂದು ಹೇಳಿದ್ದಾರೆ. ಆರ್ಥಿಕ ಅಸ್ಥಿರತೆ ಕೂಡ ವಂಚನೆ ಪ್ರಕರಣ ಹೆಚ್ಚಲು ಪ್ರಮುಖ ಕಾರಣ ಎಂದು `ಕೆಪಿಎಂಜಿ' ಹಿರಿಯ ಅಧಿಕಾರಿ ರೋಹಿತ್ ಮಹಾಜನ್ ಹೇಳಿದ್ದಾರೆ.