ಕಂಪ್ಲಿ: `ಮಾತೃದೇವೋಭವ, ಪಿತೃ ದೇವೋಭವ ಎಂದು ಹೇಳುವ ನಾವು ಹೆತ್ತ ತಂದೆ ತಾಯಿಗಳನ್ನು ವೃದ್ಧಾಶ್ರ ಮಕ್ಕೆ ಸೇರಿಸುವುದು ನೋವಿನ ಸಂಗತಿ' ಎಂದು ಎಮ್ಮಿಗನೂರು ಶಿಕ್ಷಕ ಮಲ್ಲಿಕಾರ್ಜುನ ಚೋರನೂರು ಹೇಳಿದರು.
`ಓದ್ಸೋ ಜಡೆಮ್ಮ' ಗುರುಸಿದ್ದಯ್ಯ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಂಪ್ಲಿ ಹೋಬಳಿ ಘಟಕ ವಾಗಿನಗೇರಿ ವಿಶಾಲಾಕ್ಷಮ್ಮ ಅವರ ಸ್ಮರಣಾರ್ಥ ಬುಧವಾರ ಹಮ್ಮಿ ಕೊಂಡಿದ್ದ `ಆಧುನಿಕ ಯುಗದಲ್ಲಿ ತಂದೆ ತಾಯಿಗಳ ಮತ್ತು ಮಕ್ಕಳ ಬಾಂಧವ್ಯ' ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
`ಮಕ್ಕಳ ಏಳ್ಗೆಗಾಗಿ ಸದಾ ಶ್ರಮಿಸುವ ಮತ್ತು ದೇವರಿಗೆ ಸಮನಾದ ಸ್ಥಾನ ಹೊಂದಿರುವ ತಂದೆ ತಾಯಿಗಳನ್ನು ಇನ್ನು ಮುಂದಾದರೂ ವೃದ್ಧಾಶ್ರಮಕ್ಕೆ ಸೇರಿಸುವ ಸಂಸ್ಕೃತಿಯನ್ನು ನಿಲ್ಲಿಸಬೇಕು' ಎಂದು ಮನವಿ ಮಾಡಿದರು. ಕಂಪ್ಲಿ ಫಿರ್ಕಾ ವೀರಶೈವ ಸಂಘ ಅಧ್ಯಕ್ಷ ಪಿ. ಮೂಕಯ್ಯಸ್ವಾಮಿ ಮತ್ತು ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ವಿ. ವಿದ್ಯಾಧರ ಮಾತನಾಡಿದರು.
ಸನ್ಮಾನ: ಅಲೆಮಾರಿ ಜನಾಂಗದ ಮುಖಂಡ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಣ್ಣ ಹುಲುಗಪ್ಪ, ಎಮ್ಮಿಗನೂರು ಶಿಕ್ಷಕ ಮಲ್ಲಿಕಾರ್ಜುನ ಚೋರನೂರು, ಕಂಪ್ಲಿ ಫಿರ್ಕಾ ವೀರಶೈವ ಸಂಘ ಅಧ್ಯಕ್ಷ ಪಿ. ಮೂಕಯ್ಯಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಬಡ ವಿದ್ಯಾರ್ಥಿಗಳಿಗೆ ವಿಶಾಲಾಕ್ಷಮ್ಮ ಸ್ಮರಣಾರ್ಥ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು.
ಕಸಾಪ ಹೊಸಪೇಟೆ ತಾಲ್ಲೂಕು ಗೌರವ ಕಾರ್ಯದರ್ಶಿ ಅಗಳಿ ಪಂಪಾಪತಿ, ಅನಿಲ್ ಶೀಲವಂತರ, ಎಚ್. ನಾಗರಾಜ್ ಹಾಜರಿದ್ದರು.
ಮುಖ್ಯಗುರು ತಿಪ್ಪಣ್ಣ ಪ್ರಾಸ್ತಾವಿಕ ಮಾತನಾಡಿದರು. ವೈ. ಬಸವರಾಜ ಸ್ವಾಗತಿಸಿದರು, ರಾಜು ಬೆಳಂಕರ್ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕ ಶರಣಬಸಪ್ಪ ಮಲಗ ವಂದಿಸಿದರು.