ಅಥಣಿ: ಲೈನಮನ್, ಮೀಟರ್ ರೀಡರ್, ಶಾಖಾಧಿಕಾರಿ ಮತ್ತು ಲೆಕ್ಕಪತ್ರ ವಿಭಾಗದ ನೌಕರರು ಸೇರಿ ಒಟ್ಟು 42 ಜನ ಹೆಸ್ಕಾಂ ಅಥಣಿ ವಿಭಾಗದ ಸಿಬ್ಬಂದಿ ಸೋಮವಾರ ಏಕಕಾಲಕ್ಕೆ ಸಾಮೂಹಿಕವಾಗಿ ರಜೆ ಮೇಲೆ ತೆರಳಿರುವುದರಿಂದ ದಿನನಿತ್ಯದ ಆಡಳಿತದಲ್ಲಿ ಸಮಸ್ಯೆಗೆ ಕಾರಣವಾಗಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿರುವ ವಿಭಾಗದ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್ ನಾಯಿಕ, ತಮ್ಮ ಅಧೀನ ಬರುವ ಇಬ್ಬರು ಶಾಖಾಧಿಕಾರಿಗಳು ಮಾತ್ರ ವೈಯಕ್ತಿಕ ಕಾರಣಗಳಿಂದ ರಜೆ ಮೇಲೆ ತೆರಳಿದ್ದಾರೆಂದು ತಿಳಿಸಿದರು.
ಇನ್ನು ಉಳಿದ 40 ಜನ ಸಿಬ್ಬಂದಿ ಆಯಾ ಶಾಖಾಧಿಕಾರಿಗಳ ಅನುಮತಿಯ ಮೇರೆಗೆ ರಜೆಯ ಮೇಲೆ ತೆರಳಿರಬಹುದಾದರೂ ಆ ಬಗ್ಗೆ ತಮಗೆ ಖಚಿತ ಮಾಹಿತಿ ಇಲ್ಲ, ಸ್ಪಷ್ಟ ಮಾಹಿತಿ ಮಂಗಳವಾರದ ಹೊತ್ತಿಗೆ ನೀಡುವುದಾಗಿ ಅವರು ತಿಳಿಸಿದರು.
ಇಷ್ಟೊಂದು ಜನ ಸಿಬ್ಬಂದಿ ಏಕಕಾಲಕ್ಕೆ ಒಂದು ವಿಭಾಗದಲ್ಲಿ ಗೈರು ಹಾಜರಾಗಿದ್ದರೂ ದೈನಂದಿನ ವ್ಯವಸ್ಥೆಯಲ್ಲಿ ಸದ್ಯಕ್ಕೆ ಯಾವುದೇ ತೊಂದರೆಯಾಗಿಲ್ಲ, ಕೆಲಸದ ಒತ್ತಡ ನೋಡಿಕೊಂಡು ಸಿಬ್ಬಂದಿಗೆ ಆಯಾ ಶಾಖಾಧಿಕಾರಿಗಳು ರಜೆ ಮಂಜೂರು ಮಾಡುವ ಅವಕಾಶವಿರುವುದರಿಂದ ಇದು ಸಾಮೂಹಿಕ ರಜೆ ನಿಯಮ ಉಲ್ಲಂಘನೆ ಅಲ್ಲವೆಂದರು.
ಅಷ್ಟಕ್ಕೂ ಸಾಮೂಹಿಕವಾಗಿ ರಜೆಯ ಮೇಲೆ ತೆರಳಿರುವ ಸಿಬ್ಬಂದಿ ಮೇಲಾಧಿಕಾರಿಗಳಿಗೆ ವೈಯಕ್ತಿಕ ಕಾರಣದ ನೆಪ ಹೇಳಿದ್ದರೂ ಕೂಡ ವಾಸ್ತವದಲ್ಲಿ ಇವರೆಲ್ಲ ಸೇರಿಕೊಂಡು ಬ್ಯಾಕ್ಲಾಗ್ ಹುದ್ದೆಗಳಿಗೆ ಬಡ್ತಿ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು ಖಾಸಗಿ ಬಸ್ವೊಂದರ ಮೂಲಕ ಬೆಂಗಳೂರಿಗೆ ನಿನ್ನೆಯಷ್ಟೇ ತೆರಳಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ