ಇಸ್ಲಾಮಾಬಾದ್ (ಪಿಟಿಐ): ಇಡೀ ದೇಶವನ್ನೆ ತಲ್ಲಣಗೊಳಿಸಿದ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ (26/11) ಪ್ರಮುಖ ಸೂತ್ರಧಾರ ಅಬು ಜುಂದಾಲ್ ನೀಡಿದ ಹೇಳಿಕೆಯ ಪ್ರತಿಯೊಂದನ್ನು ಒದಗಿಸಲು ಪಾಕಿಸ್ತಾನದ ಒಳಾಡಳಿತ ಸಚಿವ ರೆಹಮಾನ್ ಮಲ್ಲಿಕ್ ಭಾರತವನ್ನು ಒತ್ತಾಯಿಸಿದ್ದಾರೆ.
`ಜುಂದಾಲ್ ನೀಡಿದ ಹೇಳಿಕೆ ಪ್ರತಿಯ ಜತೆಯಲ್ಲಿ ಆತನಿಗೆ ನಾವು ನೀಡಿದ್ದೇವೆ ಎನ್ನಲಾದ ಪಾಸ್ಪೋರ್ಟ್ ಅನ್ನು ಸಹ ಪಾಕಿಸ್ತಾನ ನಿರೀಕ್ಷಿಸುತ್ತದೆ~ ಎಂದು ಮಲ್ಲಿಕ್ ಟ್ವಿಟ್ಟರ್ ಸಂದೇಶದಲ್ಲಿ ಆಗ್ರಹಿಸಿದ್ದಾರೆ.
ಈ ನಡುವೆ ಭಾರತದ ಪ್ರಜೆಯಾಗಿರುವ ಅನ್ಸಾರಿ ಅಲಿಯಾಸ್ ಅಬು ಜುಂದಾಲ್ ಪಾಕ್ ಪಾಸ್ಪೋರ್ಟ್ ಬಳಸಿಕೊಂಡು ಸೌದಿ ಅರೇಬಿಯಾಕ್ಕೆ ತೆರಳಿದ್ದಾನೆ ಎಂದು ಭಾರತದ ಅಧಿಕಾರಿಗಳು ವಾದಿಸಿದ್ದರು.
ಆದರೆ ಭಾರತದ ಆರೋಪಕ್ಕೆ ಉತ್ತರಿಸಿರುವ ಮಲ್ಲಿಕ್, ಅಬು ಬಳಸಿರುವ ಪಾಸ್ಪೋರ್ಟ್ ನೈಜವಾದುದ್ದೇ ಎಂಬುದನ್ನೂ ಪರಿಶೀಲಿಸಬೇಕಾಗುತ್ತದೆ. ಅಪರಾಧಿಗಳು ಬಳಸುವ ನಕಲಿ ಪಾಸ್ಪೋರ್ಟ್ಗಳೆಲ್ಲ ಪಾಕಿಸ್ತಾನದ ಪಾಸ್ಪೋರ್ಟ್ಗಳು ಹೇಗಾಗುತ್ತವೆ ಎಂದು ಅವರು ಪ್ರಶ್ನಿಸಿದ್ದಾರೆ. ಭಾರತ ಕೈಗೊಂಡಿರುವ ಎಲ್ಲ ತನಿಖೆಗಳಿಗೆ ಪಾಕ್ ತನ್ನ ಸಹಕಾರ ಮುಂದುವರೆಸುತ್ತದೆ ಇದೇ ಹೊತ್ತಿಗೆ ಎರಡೂ ದೇಶಗಳು ತಮ್ಮ `ಸಾಮಾನ್ಯ ವೈರಿ~ಯನ್ನು ಗುರುತಿಸಬೇಕಾಗಿದೆ ಎಂದೂ ಮತ್ತೊಂದು ಸಂದೇಶದಲ್ಲಿ ಹೇಳಿದ್ದಾರೆ.
ಗಡಿ ವಿವಾದ: ಇಂದು ಪಾಕ್ ನಿಯೋಗ
ಇಸ್ಲಾಮಾಬಾದ್ (ಪಿಟಿಐ): ಗಡಿ ವಿವಾದದ ಕುರಿತು ಚರ್ಚೆ ನಡೆಸಲು ಪಾಕಿಸ್ತಾನದ ಅರೆಸೇನಾಪಡೆಯ ಮುಖ್ಯಸ್ಥರನ್ನು ಒಳಗೊಂಡ ಅಧಿಕಾರಿಗಳ ನಿಯೋಗವೊಂದು ಜುಲೈ1ರಿಂದ 5ರತನಕ ನವದೆಹಲಿಯಲ್ಲಿ ಗಡಿ ಭದ್ರತಾ ಪಡೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸುವುದು.
ಗಡಿಯಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಯ್ದುಕೊಳ್ಳಲು ಎರಡೂ ದೇಶಗಳು ಅಕ್ರಮ ನುಸುಳುವಿಕೆ, ಕಳ್ಳಸಾಗಣೆ, ಮಾದಕದ್ರವ್ಯ ಸಾಗಾಟ ಮತ್ತಿತರ ವಿಷಯಗಳ ಕುರಿತು ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.