ಗುರುಮಠಕಲ್: ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಬಸ್ ನಿಲ್ದಾಣದ ಕಾಮಗಾರಿ ಆರಂಭಗೊಂಡು ಸುಮಾರು 2 ವರ್ಷ ಕಳೆಯುತ್ತಿದ್ದರೂ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ.
2011- 12ನೇ ಸಾಲಿನಲ್ಲಿ ಮೊದಲಿದ್ದ ಹಳೆಯ ಬಸ್ ನಿಲ್ದಾಣವನ್ನು ನೆಲಸಮಗೊಳಿಸಿ ಅಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಸುಮಾರು 1.30 ಕೋಟಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಲು ಚಾಲನೆ ನೀಡಲಾಯಿತು.
ಆದರೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ನಿಲ್ದಾಣದಲ್ಲಿ ಪ್ರಯಾಣಿಕರು ಮಳೆ, ಬಿಸಿಲಿನಿಂದಾಗಿ ತೀರಾ ತೊಂದರೆ ಅನುಭವಿಸಬೇಕಾಗಿದೆ.
ಹಳೆಯ ಬಸ್ ನಿಲ್ದಾಣವನ್ನು ನೆಲಸಮಗೊಳಿಸಿ ಆವರಣದಲ್ಲಿ ತಾತ್ಕಾಲಿಕ ಶೆಡ್ವೊಂದನ್ನು ನಿರ್ಮಿಸಿ ಪ್ರಯಾಣಿಕರಿಗೆ ವ್ಯವಸ್ಥೆ ಮಾಡಲಾಗಿತ್ತು.
ಸ್ಥಳದ ಕೊರತೆ ಇರುವುದರಿಂದ ಪ್ರಯಾಣಿಕರು ಮರಗಳ ಕೆಳಗೆ ನಿಂತು ಕಾಲಕಳೆಯುತ್ತಿದ್ದಾರೆ. ಈಗ ಮಳೆಗಾಲ ಶುರುವಾಗಿದ್ದು, ಪ್ರಯಾಣಿಕರು ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳ ಆಸರೆಗೆ ಓಡಿ ಹೋಗಬೇಕಾಗಿದೆ. ಇಕ್ಕಟ್ಟಾದ ಸ್ಥಳದಲ್ಲಿ ಬಸ್ಗಳು ನಿಲ್ಲಲು ಅಡೆಚಣೆಯಾಗುತ್ತಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿ ಕಾಮಗಾರಿ ಪೂರ್ಣಗೊಳಿಸಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ.