ನರಗುಂದ: `ಬಡೂರಾಗಿ ಎಂದು ಹುಟ್ಟಬಾರದ್ರಿ, ಕೂಲಿ ಮಾಡೋಕೊಂತ ಬದುಕುವಾಗ ನನ್ನ ಮಗ ಅಲ್ತಾಫ್ನಿಗೆ ಎಡವಿದ ನೆವಾ ಆಗಿ ಹೊಟ್ಟೆ ನೋವ ಬಂದೂ ಹೊಟ್ಟೆ ಊತ ಬಿಟೈತಿ, ಎಲ್ಲಾ ಕಡೆ ತೋರಿಸ್ದಿವಿ, ಚಿಕಿತ್ಸೆಗೆ ನಾಲ್ಕು ಲಕ್ಷ ರೂಪಾಯಿ ಕೇಳತಾರಾ ಏನೂ ಮಾಡೂದ್ರಿ, ಯಾಕ ಇಂಥಾ ಸ್ಥಿತಿ ನಮ್ಗೆ ?' ಎಂದು ಪಟ್ಟಣದ ಅರ್ಭಾಣ ಓಣಿಯ ಹಸನ್ಸಾಬ್ ನದಾಫ್ (ಪಿಂಜಾರ) ದಂಪತಿ ಮಾತು ಕೇಳಿದರೆ ಎಂಥವರ ಕರಳು ಚುರ್ರ ಎನಿಸುತ್ತದೆ.
ಇವರ ನಾಲ್ಕು ವರ್ಷದ ಮಗ ಅಲ್ತಾಫ್ ಆರು ತಿಂಗಳ ಹಿಂದೆ ಮನೆ ಅಂಗಳದಲ್ಲಿ ಆಡುತ್ತಿರುವಾಗ ಎಡವಿ ಬಿದ್ದ ಪರಿಣಾಮ ಹೊಟ್ಟೆನೋವು ಕಾಣಿಸಿಕೊಂಡಿತು.
ಆಗ ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ಒಂದು ವಾರ ವಾರ ಚಿಕಿತ್ಸೆ ಕೊಡಿಸಿದರೂ ವಾಸಿಯಾಗಲೇ ಇಲ್ಲ. ಇದರ ಬದ ಲಾಗಿ ದಿನೇ ದಿನೇ ಹೊಟ್ಟೆ ಉಬ್ಬಿಕೊಂಡು ದೇಹಕ್ಕಿಂತ ಹೊಟ್ಟೆಯೇ ದೊಡ್ಡದಾಗಿ ಕಾಣಿಕೊಂಡು ನೋವು ಹೆಚ್ಚಾ ಯಿತು. ಹೇಗಾದರೂ ಮಗನನ್ನು ಇದರಿಂದ ಪಾರು ಮಾಡ ಬೇಕು ಎಂದು ಗದಗ, ಹುಬ್ಬಳ್ಳಿ, ಹೈದರಾಬಾದ್, ವಿಜಾ ಪುರ, ಬೆಳಗಾವಿ ಚೆನೈನಲ್ಲಿ ತೋರಿಸಿದ್ದರೂ ಗುಣ ಮುಖ ವಾಗಿಲ್ಲ. ಈಗ ಪುಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆದರೆ ಹೊಟ್ಟೆ ನೋವು ಮಾತ್ರ ವಾಸಿಯಾಗಿಲ್ಲ.
ಕಾರಣ ಶಸ್ತ್ರ ಚಿಕಿತ್ಸೆ ಮಾಡಲೇಬೇಕಾಗಿದೆ. ಅದಕ್ಕೆ ಕಡಿಮೆ ಎಂದರೂ ಎರಡುವರೆ ಲಕ್ಷ ರೂಪಾಯಿ ಅವಶ್ಯವಿದೆ. ಆದರೆ ಇಷ್ಟೊಂದು ಹಣ ಇವರಿಗೆ ಸೇರಿಸಲು ಅಸಾಧ್ಯ. ಏಕೆಂದರೆ ಇವರಿಗೆ ಕೂಲಿಯೇ ಆಶ್ರಯ.
ಈ ಮೊದಲು ಹೈದರಾಬಾದ್ನಲ್ಲಿ ತೋರಿಸಿದಾಗ ಕರುಳಲ್ಲಿ ನೀರು ತುಂಬಿದೆ. ಶಸ್ತ್ರ ಚಿಕಿತ್ಸೆ ಮಾಡಲೇಬೇಕೆಂದು ವೈದ್ಯರು ನಾಲ್ಕು ಲಕ್ಷ ರೂಪಾಯಿ ಕೇಳಿದ್ದರು. ಆದರೆ ಅಷ್ಟು ಹಣ ಹೊಂದಿಸಲಾಗಿದೇ `ಬಂದ ದಾರಿಗೆ ಸುಂಕವಿಲ್ಲ' ಎಂಬಂತೆ ಮರಳಿ ನರಗುಂದಕ್ಕೆ ಬಂದಿದ್ದರು. ಆದರೆ ಮತ್ತೆ ಹೊಟ್ಟೆ ನೋವು ಹೆಚ್ಚಾಗಿ ಹೊಟ್ಟೆ ಉಬ್ಬುವುದು ಹೆಚ್ಚಾ ಗುತ್ತಿರುವಾಗ ಮತ್ತೆ ಕೆಲವರ ಸಲಹೆ ಪ್ರಕಾರ ಪುಣೆಗೆ ತೆರಳಿ ಅಲ್ಲಿಯ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ. ಆದರೆ, ಅಲ್ಲಿಯೂ ಶಸ್ತ್ರ ಚಿಕಿತ್ಸೆಗೆ ಎರಡುವರೆ ಲಕ್ಷ ರೂಪಾಯಿ ಕೇಳಿದ್ದು ಈಗ ಅದನ್ನು ಹೊಂದಿಸಲು ನದಾಫ್ ದಂಪತಿ ಪರ ದಾಡುತ್ತಿದ್ದಾರೆ. ಮಗನ ಹೊಟ್ಟೆ ನೋವಿನ ನರಕಯಾತನೆ ಕೇಳದಂತಾಗಿದೆ. ಹೊಟ್ಟೆ ದಿನೇ ದಿನೇ ಉಬ್ಬತೊಡಗಿದೆ.
ಆದರೆ ಎರಡೂವರೆ ಲಕ್ಷ ರೂಪಾಯಿಗಳನ್ನು ಹೇಗೆ ಕೂಡಿ ಸುವುದು ಎಂಬುದು ಅವರಿಗೆ ಬೆಟ್ಟದಷ್ಟು ಸಮಸ್ಯೆಯಾಗಿದೆ. ಆದ್ದರಿಂದ ಈ ನದಾಫ್ ದಂಪತಿ ಸಾರ್ವಜನಿಕರ, ಕೊಡುಗೈ ದಾನಿಗಳ ಮೊರೆ ಹೋಗಿದ್ದು ಅವರಿಗೆ ಸಹೃದಯಿಳು ಸ್ಪಂದಿಸಬೇಕಾಗಿದೆ.
ಸಹಾಯ ಮಾಡಲಿಚ್ಛಿಸುವವರು ಹಸನಸಾಬ್ ನದಾಫ್ (ಪಿಂಜಾರ) ಸಿಂಡಿಕೇಟ್ ಬ್ಯಾಂಕ್ ಸಂಖ್ಯೆ ಖಾತೆ ನಂ 12132210002160ಗೆ ಜಮಾ ಮಾಡಿ ಅಥವಾ 9902221666ಗೆ ಸಂಪರ್ಕಿಸಿ ಕರೆ ಮಾಡಿ ಮಾನವೀಯತೆ ತೋರಬೇಕು ಎಂದು ದಂಪತಿ ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.