ಯಾದಗಿರಿ: ಹಿಂದುಳಿದ ಯಾದಗಿರಿ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಖಾಸಗಿ ಕಂಪೆನಿಗಳ ಹೊಸ ಉದ್ದಿಮೆಗಳ ಸ್ಥಾಪನೆ ಅಗತ್ಯವಾಗಿದೆ ಎಂದು ಉದ್ಯಮಿ, ಕಾಂಗ್ರೆಸ್ ಮುಖಂಡ ಸಾಯಿಬಣ್ಣ ಬೋರಬಂಡಾ ಹೇಳಿದರು.
ಭಾನುವಾರ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ಶಾಹಿ ಎಕ್ಸ್ಪೋರ್ಟರ್್ ಕಂಪೆನಿ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಿಂದ ಸಾವಿರಾರು ಕುಟುಂಬಗಳು ಉದ್ಯೋಗ ಅರಸಿ ಬೃಹತ್ ನಗರಗಳಿಗೆ ಗುಳೆ ಹೋಗುತ್ತಿವೆ. ಅಲ್ಲಿ ಅವರಿಗೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ. ಈ ಭಾಗದಲ್ಲಿ ಉದ್ದಿಮೆ ಆರಂಭಿಸುವ ದೃಷ್ಟಿಯಿಂದ ಉದ್ಯೋಗ ಮೇಳ ಹಮ್ಮಿಕೊಂಡಿರುವುದು ಬದಲಾವಣೆಯ ಸಂಕೇತ ಎಂದರು.
ತಾಲ್ಲೂಕಿನಲ್ಲಿ ಕಂಪೆನಿಗಳ ಸ್ಥಾಪನೆಗೆ ಅಗತ್ಯವಾದ ನೀರು, ವಿದ್ಯುತ್, ರೈಲ್ವೆ ಸಂಪರ್ಕಗಳ ಅನುಕೂಲತೆ ಇದ್ದು, ಖಾಸಗಿ ಕಂಪೆನಿಗಳು ಉದ್ಯಮ ಆರಂಭಿಸಬೇಕು. ಇದರಿಂದ ಸ್ಥಳೀಯ ನಿರುದ್ಯೋಗ ಮಹಿಳೆಯರಿಗೆ ಹಾಗೂ ಪುರುಷರಿಗೆ ಉದ್ಯೋಗ ಕಲ್ಪಿಸಬಹುದು. ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಹಿ ಕಂಪೆನಿಯ ಚಟುವಟಿಕೆಗಳನ್ನು ನಾನು ಕಳೆದ ಹತ್ತು ವರ್ಷಗಳಿಂದ ಗಮನಿಸುತ್ತಿದ್ದೇನೆ. ಉದ್ಯೋಗಿಗಳಿಗೆ ಸೂಕ್ತ ಉಚಿತ ವಸತಿ, ಆರೋಗ್ಯ, ವೇತನ ನೀಡುವ ಮೂಲಕ ರಕ್ಷಣೆ ನೀಡುತ್ತಿದೆ. ಈ ಭಾಗದಲ್ಲಿ ಕಾರ್ಖಾನೆ ಸ್ಥಾಪನೆ ಕುರಿತು, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಒಂದು ವೇಳೆ ಕಾರ್ಖಾನೆ ಆರಂಭವಾದರೆ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ ಎಂದ ಅವರು, ಸೋಮವಾರ ಬೆಳಿಗ್ಗೆ 11ಕ್ಕೆ ಗುರುಮಠಕಲ್ ಪಟ್ಟಣದ ಸಾಮ್ರಾಟ್ ವಸತಿ ಗೃಹದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದರು.
ಕಂಪೆನಿಯ ಹಿರಿಯ ಕಾರ್ಯ ನಿರ್ವಾಹಕ ಆಧಿಕಾರಿ ಕೀರ್ತಿಕುಮಾರ ಮಾತನಾಡಿ, ಈ ಉದ್ಯೋಗ ಮೇಳದಲ್ಲಿ ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗದ ಸಂಪೂರ್ಣ ಮಾಹಿತಿ ನೀಡುವುದರ ಜೊತೆಗೆ, ಅವರನ್ನು ಆಯ್ಕೆ ಮಾಡಿಕೊಂಡು ಕಂಪೆನಿ ವತಿಯಿಂದ ಅಗತ್ಯ ತರಬೇತಿ ನೀಡಲಾಗುವುದು. ಆರಂಭದಲ್ಲಿ ರೂ. 5,500 ಸಂಬಳ ನೀಡಲಾಗುವುದು. ಈ ಭಾಗದ ನೂರಾರು ಮಹಿಳೆಯರು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು ಈ ಅವಕಾಶದ ಸದುಪಯೋಗ ಪಡೆಯಬೇಕು ಎಂದರು.
ನಮ್ಮ ಕಂಪೆನಿಯು ಏಷ್ಯಾ ಖಂಡದಲ್ಲಿಯೇ ರಫ್ತಿನಲ್ಲಿ ಪ್ರಥಮ ಸ್ಥಾನ ಪಡೆದಿದೆ. ಭಾರತದಲ್ಲಿ 34 ಶಾಖೆಗಳನ್ನು ಹೊಂದಿದೆ. ಬೆಂಗಳೂರಿನಲ್ಲಿಯೇ 30 ಶಾಖೆಗಳಿದ್ದು, ಅದರ ಮೂಲಕ 70ಸಾವಿರ ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದೆ ಎಂದು ತಿಳಿಸಿದರು.
ನವೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಳದಲ್ಲಿ ನೂರಾರು ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.