ವಡೋದರ(ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮಹತ್ವಾಕಾಂಕ್ಷೆಯ ‘ಏಕತೆಯ ಮೂರ್ತಿ’ ಯೋಜನೆಯ ಬೆಂಬಲಕ್ಕಾಗಿ ಆಯೋಜಿಸಿದ್ದ ‘ಏಕತಾ ಓಟ’ ಅಭಿಯಾನಕ್ಕೆ ಭಾನುವಾರ ಬೆಳಿಗ್ಗೆ ಇಲ್ಲಿ ಚಾಲನೆ ನೀಡಿದರು.
ಸರ್ದಾರ್ ವಲಭಭಾಯ್ ಪಟೇಲ್ ಅವರ 63ನೇ ಪುಣ್ಯತಿಥಿಯ ಸಂದರ್ಭದಲ್ಲಿ ‘ಏಕತಾ ಓಟ’ ಆಯೋಜಿಸಲಾಗಿತ್ತು. ಈ ‘ಏಕತಾ ಓಟ’ ಭಾನುವಾರ ದೇಶದಾದ್ಯಂತ 1,100 ನಗರ, ಪಟ್ಟಣಗಳಲ್ಲಿ ಏಕಕಾಲಕ್ಕೆ ನಡೆದಿದೆ.
ಸರ್ದಾರ್ ವಲ್ಲಭಬಾಯ್ ಪಟೇಲ್ರ ಬೃಹತ್ ಮೂರ್ತಿ ನಿರ್ಮಾಣಕ್ಕೆ ಹಳ್ಳಿ, ಹಳ್ಳಿಗಳಿಂದ ಕಬ್ಬಿಣ ಸಂಗ್ರಹಿಸುವ ಕೆಲಸ ನಡೆಯುತ್ತಿದೆ.
ದೊಡ್ಡ ಪ್ರತಿಮೆ: ‘ಗುಜರಾತ್ ಸರ್ಕಾರವು ನರ್ಮದಾ ನದಿಯ ಸಾಧುಬೆಟ್ ಎಂಬಲ್ಲಿ ‘ಏಕತೆಯ ಮೂರ್ತಿ’ ಎಂಬ ಹೆಸರಿನಲ್ಲಿ ಸರ್ದಾರ್ ಪಟೇಲ್ ಅವರ ಬೃಹತ್ ಪ್ರತಿಮೆಯನ್ನು ಕಟ್ಟುತ್ತಿದ್ದು, ಇದು ಜಗತ್ತಿನ ಅತಿದೊಡ್ಡ ಪ್ರತಿಮೆಯಾಗಲಿದೆ’ ಎಂದು ಅವರು ಹೇಳಿದರು.
‘ಜನರನ್ನು, ಹಳ್ಳಿಗಳನ್ನು ಮತ್ತು ದೇಶವನ್ನು ಒಗ್ಗೂಡಿಸುವ ಉದ್ದೇಶದಿಂದ ಈ ಅಭಿಯಾನವನ್ನು ರೂಪಿಸಲಾಗಿದೆ. ಇದು ಭಾರತೀಯರೆಲ್ಲರ ಕನಸು ಮತ್ತು ಅಭಿಲಾಷೆಯನ್ನು ಸಾಕಾರಗೊಳಿಸುವ ಪ್ರಯತ್ನ. ದಯವಿಟ್ಟು ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದು ಬೇಡ’ ಎಂದು ಅವರು ಹೇಳಿದರು.
ಅಹಮದಾಬಾದ್ನಲ್ಲಿ ‘ಏಕತಾ ಓಟ’ಕ್ಕೆ ಚಾಲನೆ ನೀಡಿದ ಬಿಜೆಪಿ ಮುಖಂಡ ಎಲ್ ಕೆ ಅಡ್ವಾಣಿ, ‘ಈ ಅಭಿಯಾನವು ಪಟೇಲ್ ಅವರಿಗೆ ಸಲ್ಲಿಸಿದ ಯೋಗ್ಯ ಗೌರವವಾಗಿದೆ’ ಎಂದು ಹೇಳಿದರು.