ಬೆಂಗಳೂರು: ‘ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ರೈತರ ಭೂದಾಖಲೆ ಪಡೆಯಲು ಭೂಮಿ ಯೋಜನೆ ಜಾರಿಗೆ ತಂದರೂ ನನ್ನನ್ನು ಕೇವಲ ಐಟಿ–ಬಿಟಿ ಅಭಿವೃದ್ಧಿ ಮಾಡಿದ ವ್ಯಕ್ತಿಯಾಗಿ ಗುರುತಿಸಲಾಗುತ್ತದೆ’ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಿಷಾದ ವ್ಯಕ್ತಪಡಿಸಿದರು.
‘ಮಧ್ಯಾಹ್ನದ ಬಿಸಿಯೂಟ ನನಗೆ ಎಲ್ಲಕ್ಕಿಂತ ಖುಷಿ ಕೊಟ್ಟ ಯೋಜನೆ’ ಎಂದು ಹೇಳಿದರು. ‘ಅಧಿಕಾರದಲ್ಲಿ ಇದ್ದಾಗ ಒಂದು ಸಮಾರಂಭದಲ್ಲೂ ಪೂರ್ಣವಾಗಿ ಇರಲು ಆಗುತ್ತಿರಲಿಲ್ಲ. ಯಾವ ಭಾಷಣಗಳನ್ನೂ ಕೇಳಿಸಿಕೊಳ್ಳಲು ಆಗುತ್ತಿರಲಿಲ್ಲ. ಇನ್ನುಮುಂದೆ ಇಂತಹ ಕೆಲಸಗಳಿಗೆ ಒತ್ತುಕೊಟ್ಟು ದೊಡ್ಡವರ ಸಹವಾಸದಲ್ಲಿ ಕಾಲ ಕಳೆಯುತ್ತೇನೆ’ ಎಂದು ತಿಳಿಸಿದರು.
‘ಕನ್ನಂಬಾಡಿ ಅಣೆಕಟ್ಟೆ ನಿರ್ಮಾಣದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರಷ್ಟೇ ಕೃಷ್ಣರಾಜೇಂದ್ರ ಒಡೆಯರ್ ಅವರ ಪಾತ್ರವೂ ಇದೆ’ ಎಂದು ಅಭಿಪ್ರಾಯಪಟ್ಟರು. ‘ಬರಗೂರರು ಹಲವು ಮಹತ್ವದ ವಿಷಯಗಳನ್ನು ಸಾರ್ವಜನಿಕ ಚರ್ಚೆಗೆ ಒಡ್ಡುವ ರೀತಿ ಅನನ್ಯವಾದುದು’ ಎಂದು ಹೇಳಿದರು.