ಯಾದಗಿರಿ: ಬೋಧನೆ ಮತ್ತು ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವುದೇ ಕಲಿಕೋತ್ಸವದ ಉದ್ದೇಶ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪಾರ್ವತಮ್ಮ ಕಾಡಂನೋರ ಹೇಳಿದರು.
ಸಮೀಪದ ವಡಗೇರಾದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ, ಮಕ್ಕಳ ಭವಿಷ್ಯ ರೂಪಿಸಲು, ಗುಣಮಟ್ಟದ ಶಿಕ್ಷಣವನ್ನು ನೀಡಲು ಸರ್ಕಾರವು ವಿನೂತನವಾದ ಕಲಿಕೋತ್ಸವ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಕಲಿಕೋತ್ಸವದ ಮೂಲ ಉದ್ದೇಶ ಪಾಲಕರ ಎದುರಿನಲ್ಲಿಯೆ ಮಕ್ಕಳು ಕಲಿಕೆಯು ಹೇಗೆ ನಡೆದಿದೆ? ಹೇಗೆ ನಡೆಯಬೇಕು ಎಂಬುದನ್ನು ಚರ್ಚಿಸುವಂತಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಮಲ್ಲಣ್ಣ ಇಟಗಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಕಾಶಮ್ಮ ಪಿಡ್ಡೆಗೌಡರ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ನೀಲಹಳ್ಳಿ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಇಟಗಿ, ಅಬ್ದುಲ್ ಚಿಗಾನೂರ, ವಿರುಪಾಕ್ಷಪ್ಪಗೌಡ ಮಾಚನೂರ, ಇಮಾಮ ಪಟೇಲ್, ಚಂದ್ರಪ್ಪ, ಶಿಕ್ಷಕರಾದ ಮಂಜುಳಾ, ಪ್ರೇಮಾ, ಶಿವುಕುಮಾರ, ಶಂಭುಲಿಂಗ, ರುದ್ರಪ್ಪ, ರವಿ, ಯಲಗೊಂಡ, ಹಾಜರಿದ್ದರು. ಸಿಆರ್ಸಿ ಸೂಗಣಗೌಡ ಪೊಲೀಸ್ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶಂಕರ ಸ್ವಾಗತಿಸಿದರು. ಶಿಕ್ಷಕ ಮಸಲಿಂಗಪ್ಪ ನಾಯಕ ನಿರೂಪಿಸಿ, ವಂದಿಸಿದರು.
ಕ್ಯಾತನಾಳ: ಸರ್ಕಾರಿ ಶಾಲಾ ಮಕ್ಕಳಿಗಾಗಿ ಶಿಕ್ಷಕರು ಗುಣತ್ಮಾಕ ಶಿಕ್ಷಣ ನೀಡಿ, ಮಕ್ಕಳನ್ನು ಶಿಕ್ಷಣವಂತರಾಗಿಸಬೇಕು. ಇದು ಪ್ರತಿಯೊಬ್ಬ ಶಿಕ್ಷಕರ ಮಹತ್ತರ ಜವಾಬ್ದಾರಿಯಾಗಿದೆ ಎಂದು ಶಹಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ರಾಯಪ್ಪರೆಡ್ಡಿ ಹೇಳಿದರು.
ಸಮೀಪದ ಕ್ಯಾತನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕುರುಕುಂದಾ ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕುರುಕುಂದಾ ಕ್ಲಸ್ಟರ್ ಸಿಆರ್ಪಿ ಕರಣಪ್ಪ ನಾಯ್ಕಲ್, ಇಸಿಒ ಶರಣಬಸವ, ರಾಜೇಂದ್ರ ಮತ್ತಿತರರು ಅತಿಥಿಗಳಾಗಿದ್ದರು.
ಮುಖ್ಯಾಧ್ಯಾಪಕಿ ಶರಣಮ್ಮ ಅಧ್ಯಕ್ಷತೆ ವಹಿಸಿದ್ದರು. ಕಲಿಕೋತ್ಸವದಲ್ಲಿ ನಾಟಕ, ರಸಪ್ರಶ್ನೆ, ಏಕಪಾತ್ರಾಭಿನಯ, ಸಾಕು ಪ್ರಾಣಿಗಳ ಅನುಕರಣೆ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಕ್ಕಳು ಪ್ರದರ್ಶಿಸಿದರು. ಗ್ರಾಮದ ಮುಖಂಡರು, ಮಕ್ಕಳ ಪಾಲಕರು ಭಾಗವಹಿಸಿದ್ದರು. ಶಿಕ್ಷಕ ಮಲ್ಲಿಕಾರ್ಜುನ ನಿರೂಪಿಸಿದರು. ಶಿಕ್ಷಕಿ ಚಂದ್ರಕಲಾ ಸ್ವಾಗತಿಸಿದರು, ಶಿಕ್ಷಕಿ ಚಂದ್ರಲೇಖಾ ವಂದಿಸಿದರು.
ಮೈಲಾಪುರ: ತಾಲ್ಲೂಕಿನ ಮೈಲಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಿಕೇರಾ.ಕೆ ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಸದಸ್ಯ ಖಂಡಪ್ಪ ಉದ್ಘಾಟಿಸಿದರು.
ಬಿಆರ್ಪಿ ಮಲ್ಲಿಕಾರ್ಜುನ ಶಹಾಬಾದಿ, ಗುಣಾತ್ಮಕ ಶಿಕ್ಷಣದೆಡೆಗೆ ನಮ್ಮಯ ನಡಿಗೆ ಉದ್ದೇಶವನ್ನು ಇಟ್ಟುಕೊಂಡು ಕಲಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪರಿಣಾಮಕಾರಿ ಬೋಧನೆ, ಸ್ಪಷ್ಟ ಓದು, ಶುದ್ಧ ಬರಹ, ವಿಶೇಷ ಕಲಿಕೆ, ಗುಣಾತ್ಮಕ ಶಿಕ್ಷಣದ ಬಗ್ಗೆ ತಿಳಿಸಿದರು.
ಸಿ.ಆರ್.ಪಿ. ಗುರುನಾಥರಡ್ಡಿ ಅರಿಕೇರಾ.ಕೆ ಕ್ಲಸ್ಟರ್ ಶಾಲೆಯ ಮಕ್ಕಳು, ಎಸ್.ಡಿಎಂ.ಸಿ ಅಧ್ಯಕ್ಷರು, ಸದಸ್ಯರು, ಜನಪ್ರತಿನಿಧಿಗಳು, ಪಾಲಕರು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಮಹಾಂತೇಶ ನಿರೂಪಿಸಿದರು. ಶಿವಲೀಲ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಿಜಯಲಕ್ಷ್ಮೀ ಸ್ವಾಗತಿಸಿದರು. ಸಂಜೀವಕುಮಾರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.