ಪ್ರಜಾವಾಣಿ ವಾರ್ತೆ
ಮೂಲ್ಕಿ: ‘ಕಾಸರಗೋಡು ಪ್ರದೇಶವನ್ನು ಕರ್ನಾಟಕಕ್ಕೆ ಸೇರಿಸುವ ಹೋರಾಟಕ್ಕೆ ಎಲ್ಲಾ ಕನ್ನಡಿಗರು ಮತ್ತು ಸಂಘ ಸಂಸ್ಥೆಗಳು ನಮಗೆ ಸಹಕಾರ ನೀಡಬೇಕು, ಕೊನೆಯ ಉಸಿರು ಇರುವವರೆಗೂ ತಮ್ಮ ಹೋರಾಟ, ಆಗ್ರಹ ನಿಲ್ಲುವುದಿಲ್ಲ’ ಎಂದು ಗಡಿನಾಡ ಕನ್ನಡಿಗ ಹಿರಿಯ ಸಾಹಿತಿ ಡಾ. ಕಯ್ಯಾರ ಕಿಂಞ್ಞಣ್ಣ ರೈ ಹೇಳಿದರು.
ಬದಿಯಡ್ಕದ ತಮ್ಮ ನಿವಾಸ ಕವಿತಾ ಕುಟೀರದಲ್ಲಿ ಮೂಲ್ಕಿ ಬಂಟರ ಸಂಘ ಮತ್ತು ಮೂಲ್ಕಿ ಸುಂದರರಾಮ ಶೆಟ್ಟಿ ಚಾ್ಯಾರಿಟೆಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ 2013ನೇ ಸಾಲಿನ ಸುಂದರರಾಮ ಶೆಟ್ಟಿ ಪ್ರಶಸ್ತಿಯನ್ನು ಇತ್ತೀಚೆಗೆ ಸ್ವೀಕರಿಸಿ ಅವರು ಮಾತನಾಡಿದರು.
ತುಳುನಾಡಿನವರಾದರೂ ನಮಗೆ ತುಳು ಮತ್ತು ಕನ್ನಡ ಬೇರೆಯಲ್ಲ. ಕನ್ನಡಕ್ಕೂ ಮಾತೃ ಭಾಷೆಯ ಗೌರವ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಮತ್ತು ಭಾಷಾಭಿಮಾನವನ್ನು ಕಿರಿಯರಲ್ಲಿ ಮೂಡಿಸಬೇಕು ಎಂದರು.
ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕಾರ್ಯದರ್ಶಿ ರವಿರಾಜ ಶೆಟ್ಟಿ, ಮೂಲ್ಕಿ ಸುಂದರರಾಮ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ನ ಟ್ರಸ್ಟಿ ಸುಕುಮಾರ್ ಶೆಟ್ಟಿ, ಸಾಹಿತಿ ಎನ್.ಪಿ.ಶೆಟ್ಟಿ ಮತ್ತಿತರರು ಇದ್ದರು.