ತಿರುವನಂತಪುರಂ(ಪಿಟಿಐ): ಕಾಸಿಗಾಗಿ ಸುದ್ದಿ ಪ್ರಕಟಣೆ ಅಥವಾ ಪ್ರಸಾರ ಮಾಡುವುದು ಚುನಾವಣಾ ಪ್ರಕ್ರಿಯೆ ಮೇಲೆ ಅತಿ ಹೆಚ್ಚಿನ ಪರಿಣಾಮ ಬೀರುತ್ತದೆ. ಹಾಗಾಗಿ, ಕಾಸಿಗಾಗಿ ಸುದ್ದಿ ಮಾಡುವುದನ್ನು ಅಪರಾಧ ಎಂದು ಪರಿಗಣಿಸುವಂತೆ ಚುನಾವಣಾ ಆಯೋಗ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಹೇಳಿದ್ದಾರೆ.
‘ಚುನಾವಣೆಯಲ್ಲಿ ಸುಧಾರಣೆ’ ಕುರಿತ ವಿಚಾರ ಸಂಕಿರಣದಲ್ಲಿ ಶನಿವಾರ ಮಾತನಾಡಿದ ಸಂಪತ್, ಭ್ರಷ್ಟಾಚಾರ ಕಾಸಿಗಾಗಿ ಸುದ್ದಿಯ ಜತೆ ತಳುಕು ಹಾಕಿಕೊಂಡಿದ್ದು, ಮಾಧ್ಯಮಗಳು ಪ್ರತಿಯೊಬ್ಬರ ಮೇಲೆ ಪ್ರಭಾವ ಬೀರುತ್ತವೆ. ಇವು ಜನರ ಮೇಲೆ ಪರಿಣಾಮ ಉಂಟುಮಾಡುವ ಮೂಲಕ ಚುನಾವಣಾ ಪ್ರಕ್ರಿಯೆ ಮೇಲೆ ವ್ಯಾಪಕ ಹಾನಿ ಉಂಟು ಮಾಡುತ್ತವೆ ಎಂದು ನಿಲುವು ವ್ಯಕ್ತಪಡಿಸಿದರು.
‘ಮತ್ತೊಬ್ಬರನ್ನು ತೃಪ್ತಿಪಡಿಸಲು ಹಾಗೂ ತಾವು ಫಲವನ್ನು ಅನುಭವಿಸಲು ಕಾಸಿಗಾಗಿ ಸುದ್ದಿ ಮಾಡುವುದು ಅಪರಾಧ’ ಎಂದು ಅವರು ಪುನರುಚ್ಚರಿಸಿದರು.