ಬೆಂಗಳೂರು: ‘ಮೇಯೋ ಹಾಲ್ ವಿಭಾಗದ ವಕೀಲರ ಸಂಘಕ್ಕೆ ತನ್ನದೇ ಆದ ಇತಿಹಾಸ, ವೈಭವ ಹಾಗೂ ಅಸ್ತಿತ್ವ ಇತ್ತು. ಆದರೆ ಆ ಗತ ವೈಭವ ಈಗ ಉಳಿದಿಲ್ಲ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ಮೇಯೋ ಹಾಲ್ ವಿಭಾಗದಲ್ಲಿ ನವೀಕರಣಗೊಂಡ ವಕೀಲರ ಸಂಘದ ಸಭಾಂಗಣವನ್ನು ಬುಧವಾರ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಆ ಗತ ವೈಭವವನ್ನು ಮರು ಸೃಷ್ಟಿಸುವ ಜವಾಬ್ದಾರಿ ಯುವ ವಕೀಲರ ಮೇಲಿದೆ’ ಎಂದರು.
ಹಾಗೆಯೇ ಕೆಲಸದ ವೇಳೆ ಶಿಸ್ತನ್ನು ಕಾಪಾಡಿಕೊಳ್ಳಲಾಗುತ್ತಿತ್ತು ಎಂದು ಹಳೇ ನೆನಪು ಮೆಲಕು ಹಾಕಿದರು.
ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ ಮುನಿಯಪ್ಪ ಮಾತನಾಡಿ, ವಕೀಲರಿಗೆ ನೀಡುವ ಕಲ್ಯಾಣ ನಿಧಿಹಾಗೂ ಪರಿಹಾರ ನಿಧಿ ಹೆಚ್ಚಿಸಲು ಪ್ರಯತ್ನ ನಡೆಸಲಾಗುತ್ತಿದೆ. ಅದರಲ್ಲೂ 4 ಲಕ್ಷ ಇರುವ ಪರಿಹಾರ ನಿಧಿ 7 ಲಕ್ಷಕ್ಕೆ ಏರಿಸಲು ವಕೀಲರ ಪರಿಷತ್ತಿನ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಹಿರಿಯರು ಬಿಟ್ಟು ಹೋದ ಹೆಜ್ಜೆ ಗುರುತನ್ನು ಯುವ ವಕೀಲರು ಪಾಲಿಸುವುದರ ಜೊತೆಗೆ ವೃತ್ತಿ ಗೌರವವನ್ನು ಕಾಪಾಡಬೇಕು ಎಂದು ಕಿವಿ ಮಾತು ಹೇಳಿದರು.
ಪ್ರಧಾನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶೆ ರತ್ನಕಲಾ, ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಇತರರಿದ್ದರು.