ಬಳ್ಳಾರಿ: ಜಾಗತೀಕರಣದ ಭರಾಟೆಯ ಪ್ರಸ್ತುತ ಸಂದರ್ಭದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಇಂಗ್ಲಿಷ್ ಭಾಷಾ ಜ್ಞಾನ ಅತ್ಯಗತ್ಯವಾಗಿದೆ ಎಂದು ಉದ್ಯಮಿ ಡಾ.ರಮೇಶ ಗೋಪಾಲ್ ಅಭಿಪ್ರಾಯಪಟ್ಟರು.
ಸ್ಥಳೀಯ ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತ ಹಾಗೂ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಸ್ತುತ ಪ್ರತಿಭೆಗೆ ಮಾತ್ರ ಬೆಲೆ ಇದ್ದು, ಸಂಪನ್ಮೂಲ ವ್ಯಕ್ತಿಗಳಾಗಿದ್ದಾಗ ಮಾತ್ರ ಖಾಸಗಿ ಕಂಪನಿಗಳಲ್ಲಿ ಉದ್ಯೋಗಾವಕಾಶ ದೊರೆಯಲು ಸಾಧ್ಯ ಎಂದು ಜಾಗತೀಕರಣದ ಮಹತ್ವವನ್ನು ವಿವರಿಸಿದರು. ಪ್ರಾಚಾರ್ಯ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ರೆಡ್ ಕ್ರಾಸ್ ಸಂಚಾಲಕ ಈಡಿಗ ಮುರಳಿ ಶಂಕರಗೌಡ , ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪಿ.ರಾಧಾಕೃಷ್ಣ ವೇದಿಕೆಯಲ್ಲಿದ್ದರು.
ಮಹಾದೇವಿ ಮತ್ತು ಸರಸ್ವತಿ ಪ್ರಾರ್ಥಿಸಿದರು. ಡಾ. ಪಿ.ರಾಧಾಕೃಷ್ಣ ಸ್ವಾಗತಿಸಿದರು. ಲೋಕೇಶ್ವರ, ಸೋಫಿಯಾಬೇಗಂ, ಅಶೋಕ್ ಕುಮಾರ್ ಮತ್ತು ಲೋಕೇಶ್ವರ್ ಕಾರ್ಯಕ್ರಮ ನಿರೂಪಿಸಿದರು. ಎಂ.ಸೋಮಶೇಖರ್ ವಂದಿಸಿದರು.