ಕೆರೆಮನೆ (ಎನ್.ಆರ್.ಪುರ): ಆತ್ಮಯೋಜನೆಯಡಿ ನಡೆಸಲಾಗುತ್ತಿರುವ ರೈತಕ್ಷೇತ್ರಪಾಠ ಶಾಲೆಯಲ್ಲಿ ನೀಡಿದ ತಾಂತ್ರಿಕ ಮಾಹಿತಿಯನ್ನು ರೈತರು ತಮ್ಮ ಸಸ್ಯಕ್ಷೇತ್ರದಲ್ಲಿ ಅವಳವಡಿಸಿಕೊಳ್ಳಬೇಕೆಂದು ಕೃಷಿ ಇಲಾಖೆಯ ಆತ್ಮ ಯೋಜನೆಯ ವಿಷಯ ತಜ್ಞೆ ವೀಣಾ ತಿಳಿಸಿದರು.
ತಾಲ್ಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಮನೆ ನಿವಾಸಿ ಪ್ರಶಾಂತ್ ಅವರ ಸಸ್ಯ ಕ್ಷೇತ್ರದಲ್ಲಿ ಶುಕ್ರವಾರ ಕೃಷಿ ಇಲಾಖೆಯ ಆತ್ಮಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ಭತ್ತದ ಕ್ಷೇತ್ರೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಈ ಭಾಗದಲ್ಲಿ ಆತ್ಮ ಯೋಜನೆಯಡಿ 5 ರೈತ ಕ್ಷೇತ್ರ ಪಾಠ ಶಾಲೆ ನಡೆಸಲಾಗಿದೆ. ಈ ಕ್ಷೇತ್ರ ಪಾಠಶಾಲೆಯಲ್ಲಿ ನೀಡಿದ ಪ್ರಾತ್ಯಕ್ಷಿಕೆ ಹಾಗೂ ವೈಜ್ಞಾನಿಕ ಮಾಹಿತಿ ದಾನಿ ರೈತರಿಗೆ ಮಾತ್ರ ಸೀಮಿತವಾಗದೆ ಎಲ್ಲಾ ರೈತರು ಇಂತಹ ತಾಂತ್ರಿಕತೆಯನ್ನು ಅಳವಡಿಸಿ ಕೊಂಡು ಹೆಚ್ಚಿನ ಇಳುವರಿ ಪಡೆಯಲು ಪ್ರಯತ್ನಿಸ ಬೇಕೆಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷಿಕ ವೈ.ಎಸ್.ಮಂಜುನಾಥ್ ತಾಲ್ಲೂಕಿನಲ್ಲಿ ಭತ್ತದ ಖರೀದಿ ಕೇಂದ್ರ ಮೊದಲೇ ಆರಂಭವಾಗಿದ್ದರೆ ಅನುಕೂಲವಾಗುತ್ತಿತ್ತು.ಇದು ತಡವಾಗಿ ಆರಂಭವಾಗಿ ರುವುದರಿಂದ ರೈತರು ಬೇರೆ ಕಡೆ ಭತ್ತ ಮಾರಾಟ ಮಾಡಿದ್ದಾರೆ. ಕೃಷಿ ಇಲಾಖೆಯ ಕಾರ್ಯಕ್ರಮಗಳನ್ನು ಎಲ್ಲರೂ ಸದುಪಯೋಗಪಡಿಸಿ ಕೊಳ್ಳಬೇಕು ಎಂದರು.
ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಶಿವಮೂರ್ತಿ ಅವರು ರೈತ ಕ್ಷೇತ್ರ ಪಾಠ ಶಾಲೆಯ ಬಗ್ಗೆ, ಗ್ರಾಮದಲ್ಲಿ ತೆಗೆದು ಕೊಂಡಿದ್ದ ಪ್ರಾತ್ಯಕ್ಷಿಕೆ ಬಗ್ಗೆ ಹಾಗೂ ಭತ್ತ ಖರೀದಿ ಕೇಂದ್ರದಲ್ಲಿ ಭತ್ತ ಮಾರಾಟ ಮಾಡುವ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಜಿತ ಕೃಷಿ ಇಲಾಖೆ ವತಿಯಿಂದ ರೈತರಿಗೆ ನೀಡುವ ಮಾಹಿತಿಯನ್ನು ಬಳಸಿಕೊಂಡು ಉತ್ತಮ ಇಳುವರಿ ಪಡೆಯ ಬೇಕೆಂದು ಹೇಳಿದರು.