ಮಂಡ್ಯ: ದೇಶ ಕಟ್ಟುವ ಜವಾಬ್ದಾರಿಯನ್ನು ಯುವ ಸಮೂಹ ತೆಗೆದುಕೊಳ್ಳಬೇಕು ಎಂದು ವಿಧಾನ ಪರಿಷತ್್ ಸದಸ್ಯೆ ಮೋಟಮ್ಮ ಹೇಳಿದರು.
ತಾಲ್ಲೂಕಿನ ಕೀಲಾರ ಗ್ರಾಮದಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ ಯವ ಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಯುವ ಶಕ್ತಿ ದೇಶದ ಶಕ್ತಿ ಆಗಿದೆ. ಆ ಶಕ್ತಿ ದೇಶವನ್ನು ಕಟ್ಟುವ ಕೆಲಸಕ್ಕೆ ಬಳಕೆಯಾಗಬೇಕು. ಆಗಲೇ ದೇಶದ ಪ್ರಗತಿ ಸಾಧ್ಯ ಎಂದರು.
ಗ್ರಾಮಾಂತರ ಪ್ರದೇಶದ ಹುಡುಗರು ಪಟ್ಟಣವನ್ನು ಸೇರಿ ಆಚಾರ, ವಿಚಾರಗಳನ್ನು ಮರೆಯುತ್ತಿದ್ದಾರೆ. ಅವುಗಳ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಇಂತಹ ಮೇಳಗಳ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್್ ಮಾತನಾಡಿ, ಕಲಾವಿದರಿಗೆ ಗೌರವ ತರುವ ಕೆಲಸವನ್ನು ಕೀಲಾರದ ಜನತೆ ಮಾಡಿದ್ದಾರೆ. ಯುವಜನೋತ್ಸವವನ್ನು ಯಶಸ್ವಿಯಾಗಿ ಮಾಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು.
ದೇವರು ಎಷ್ಟು ಕೊಟ್ಟಿದ್ದಾನೋ ಅಷ್ಟಕ್ಕೆ ಸಂತೋಷ ಪಡಬೇಕು. ಕೊಡಲಿಲ್ಲ ಎಂದು ಬೇಸರ ಪಟ್ಟುಕೊಳ್ಳಬಾರದು. ಜಿಲ್ಲೆಗೆ ಹೆಮ್ಮೆ ತರುವ ಸಮಾರಂಭ ಇದಾಗಿದೆ ಎಂದರು.
ಅನಿಕೆಗಳನ್ನು ವ್ಯಕ್ತಪಡಿಸಿದ ಅಮೃತಾ, ಸವ್ಯಸಾಚಿ, ಗಂಗಾಧರ ಅವರು, ವಸತಿ, ಕಾರ್ಯಕ್ರಮ ಆಯೋಜನೆ ತುಂಬಾ ಅಚ್ಚುಕಟ್ಟಾಗಿತ್ತು. ಕೀಲಾರ ಗ್ರಾಮದ ಜನರ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ಮೇಳ ಯಶಸ್ವಿಯಾಗಿದೆ ಎಂದು ಹೇಳಿದರು.
ಹಿರಿಯ ಜನಪದ ಕಲಾವಿದ ಕೆ.ಎಂ. ಮಧುಪ್ರಕಾಶ್, ಅಂತರರಾಷ್ಟ್ರೀಯ ಕ್ರೀಡಾಪಟು ಎಚ್.ಎಂ. ಬಾಂಧವ್ಯ, ಉದ್ಯಮಿ ಸಿ. ಚಂದ್ರಶೇಖರ್, ಡಾ.ಕೆ.ಟಿ. ಗುರುಮೂರ್ತಿ, ನಿವೃತ್ತ ಪ್ರಾಂಶುಪಾಲರಾದ ಎಂ.ಎಲ್. ಸರಸ್ವತಿ ಅವರನ್ನು ಸನ್ಮಾನಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸ್ಪರ್ಧಿಗಳು ಜನಪದ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.