ಬೆಂಗಳೂರು: ‘ನಮ್ಮ ಮೆಟ್ರೊ ಯೋಜನೆಯ ಕಾಮಗಾರಿಗಳ ಗುತ್ತಿಗೆ ಪಡೆದವರು, ಕಾರ್ಮಿಕರನ್ನು ಕಾನೂನಿನ ಪ್ರಕಾರ ನಡೆಸಿಕೊಳ್ಳದಿದ್ದರೆ ನಾವೇ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಹೈಕೋರ್ಟ್ ಶುಕ್ರವಾರ ಎಚ್ಚರಿಕೆ ನೀಡಿದೆ.
‘ನಮ್ಮ ಮೆಟ್ರೊ’ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸೂಕ್ತ ಸೌಲಭ್ಯ ನೀಡಿಲ್ಲ ಎಂದು ದೂರಿ ಸ್ಯಾಮ್ಯುಯೆಲ್ ಸತ್ಯಶೀಲನ್ ಎಂಬುವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಎಸ್.ಎನ್. ಸತ್ಯನಾರಾಯಣ ಅವರನ್ನೊಳಗೊಂಡ ವಿಭಾಗೀಯ ಪೀಠ, ‘ಕಾರ್ಮಿಕರ ಹಿತ ಕಾಯದ ಗುತ್ತಿಗೆದಾರರ ವಿವರ ನೀಡಿ. ನಾವೇ ಅವರಿಗೆ ಎಚ್ಚರಿಕೆ ನೀಡುತ್ತೇವೆ. ಆಗ ಅವರು ಕಾನೂನು ಪಾಲಿಸುತ್ತಾರೆ’ ಎಂದು ಮೌಖಿಕವಾಗಿ ಹೇಳಿತು.
ಗುತ್ತಿಗೆದಾರರು ಮತ್ತು ಉಪ–ಗುತ್ತಿಗೆದಾರರ ವಿವರ ನೀಡುವುದಾಗಿ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್ಸಿಎಲ್) ಪರ ವಕೀಲರು ಪೀಠಕ್ಕೆ ತಿಳಿಸಿದರು.
ನಿಯಮಗಳ ಉಲ್ಲಂಘನೆ: ಕಾರ್ಮಿಕರ ನೀಡಿರುವ ವಸತಿ ಸ್ಥಳವು ಸರಿಯಾಗಿಲ್ಲ. ನಾಲ್ಕು ಕ್ಯಾಂಪ್ಗಳಲ್ಲಿ ಕಾರ್ಮಿಕರು ತಗಡಿನ ಶೆಡ್ಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಗಾಳಿ–ಬೆಳಕು, ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ ಎಂಬುದು ಉಪ ಮುಖ್ಯ ಕಾರ್ಮಿಕ ಆಯುಕ್ತರ ಭೇಟಿಯ ವೇಳೆ ಕಂಡುಬಂದಿದೆ. ಆರು ಕಡೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಕೆಲಸ ಮಾಡುವ 15 ಕಡೆಗಳಲ್ಲಿ ಶೌಚಾಲಯ ಇಲ್ಲ, 12 ಕಡೆಗಳಲ್ಲಿ ಕಾರ್ಮಿಕರಿಗೆ ಗುರುತಿನ ಚೀಟಿಯನ್ನೇ ನೀಡಿಲ್ಲ ಎಂದು ಅರ್ಜಿದಾರರು ಪೀಠಕ್ಕೆ ಶುಕ್ರವಾರ ವಿವರ ಸಲ್ಲಿಸಿದ್ದಾರೆ.
‘ನಮ್ಮ ಮೆಟ್ರೊ’ ಯೋಜನೆಗಾಗಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಪೈಕಿ ಎಂಟು ಮಂದಿ ಅವಘಡದಲ್ಲಿ ಮೃತಪಟ್ಟಿದ್ದಾರೆ. ಆದರೆ ಇವರು ಗುರುತಿನ ಚೀಟಿ ಹೊಂದಿರಲಿಲ್ಲ ಎಂಬುದು ಆಯುಕ್ತರ ಭೇಟಿ ಸಂದರ್ಭದಲ್ಲಿ ಗೊತ್ತಾಗಿದೆ ಎಂದು ಅರ್ಜಿದಾರರು ತಿಳಿಸಿದರು. ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಲಾಗಿದೆ.