ಯಾದಗಿರಿ: ನಾವು ಉದ್ಯೋಗ ಕೊಡುವ ಮಾಲಿಕರಾಗಬೇಕು. ಉದ್ಯೋಗಕ್ಕಾಗಿ ಪ್ರಯತ್ನ ಮಾಡುವವರಾಗಬಾರದು ಎಂದು ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಹೇಳಿದರು.
ತಾಲ್ಲೂಕಿನ ಸೈದಾಪುರದ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವ ಸಮಾರೋಪ ಸಮಾ-ರಂಭದಲ್ಲಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ಸೃಜನಶೀಲನತೆಯನ್ನು ಸೃಷ್ಟಿಸುವ ಕೆಲಸ ಮಾಡಬೇಕು. ಆ ಮೂಲಕ ಉದ್ಯೋಗ ನೀಡುವ ಶಕ್ತಿಯನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಪ್ರತಿಯೊಬ್ಬರು ಸ್ವಾವಲಂಬಿ ಜೀವನ ಮಾಡಬೇಕು. ಅದಕ್ಕಾಗಿ ಗುಣಮಟ್ಟದ ಹಾಗೂ ಜೀವನಾಧಾರಿತ ಶಿಕ್ಷಣವನ್ನು ಸಂಸ್ಥೆಗಳು ನೀಡಬೇಕು ಎಂದರು.
ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ಪ್ರೌಢಶಾಲೆ, ಪದವಿಪೂರ್ವ ಹಾಗೂ ಡಿ.ಇಡಿ. ಕಾಲೇಜಿನ ಮಕ್ಕಳಿಗೆ ಅವರು ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.
ಸುವರ್ಣ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಮಲ್ಲರಡ್ಡೆಪ್ಪಗೌಡ ಕಣೇಕಲ್, ವಕೀಲ ಎಸ್.ಬಿ. ಪಾಟೀಲ, ಶಾಂತರಡ್ಡಿ, ಸಂಸ್ಥೆಯ ಅಧ್ಯಕ್ಷ ಸಿದ್ದಣ್ಣಗೌಡ ಕಡೇಚೂರ, ಉಪಾಧ್ಯಕ್ಷ ಬಸವಂತರಾಯಗೌಡ ಸೈದಾಪುರ, ಕಾರ್ಯದರ್ಶಿ ಭೀಮಣ್ಣಗೌಡ ಪಾಟೀಲ ಕ್ಯಾತ್ನಾಳ, ಸಹ ಕಾರ್ಯದರ್ಶಿ ಮುಕುಂದಕುಮಾರ ಅಲಿಝಾರ, ಕೋಶಾಧ್ಯಕ್ಷ ಭೀಮಣ್ಣಗೌಡ ಹೊಸಗೌಡರ ಕೂಡಲೂರ, ಆಡಳಿತ ಮಂಡಳಿಯ ಸದಸ್ಯರಾದ ಸಿದ್ರಾಮರಡ್ಡಿ ಸಂಬರ, ಬಸ್ಸಪ್ಪಗೌಡ ಬೆಳಗುಂದಿ ಇದ್ದರು. ಶಿಕ್ಷಕ ವಿಜಯಕುಮಾರ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದ ಅಂಗವಾಗಿ ಶಾಲಾ ಹಾಗೂ ಕಾಲೇಜಿನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕನ್ನಡ, ತೆಲಗು, ಮಾರಾಠಿ ಗೀತೆಗಳು ಹಾಗೂ ಭಜನೆ ಪದ, ನಾಟಕ, ದೇಶಭಕ್ತಿಗಳ ನೃತ್ಯ ಪ್ರದರ್ಶನ ನೋಡುಗರ ಗಮನ ಸೆಳೆಯಿತು.