ವಿಜಾಪುರ: ‘ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿರುವ ನನಗೆ ವೈದ್ಯಕೀಯ ನೆರವು ನೀಡಿ. ಹುಟ್ಟಿನಿಂದ ಹಾಸಿಗೆ ಹಿಡಿ ದಿರುವ ಮಗಳ ಉಪಚಾರದ ಜವಾ ಬ್ದಾರಿ ಹೊತ್ತುಕೊಳ್ಳಿ. ನಮ್ಮ ಜಮೀನಿಗೆ ದಾರಿ ಕೊಡಿಸಿ. ನನ್ನ ಗಂಡನಿಗೆ ಕೆಲವರು ಕೊಲೆ ಬೆದರಿಕೆ ಹಾಕುತ್ತಿದ್ದು, ರಕ್ಷಣೆ ಕೊಡಿ...’
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಇಲ್ಲಿ ನಡೆಸಿದ ಜನತಾ ದರ್ಶನದಲ್ಲಿ ಮಹಿಳೆಯರು ಕಣ್ಣೀರಿಡುತ್ತ ಮಂಡಿಸಿದ ಬೇಡಿಕೆಗಳಿವು. ‘ನನಗೆ ಬ್ಲಡ್ ಕ್ಯಾನ್ಸರ್ ಇದೆ. ವರ್ಷಕ್ಕೆ ಒಂದು ಲಕ್ಷ ಖರ್ಚಾಗುತ್ತಿದ್ದು, ನೆರವು ನೀಡಬೇಕು’ ಎಂದು ಯುವತಿ ಯೊಬ್ಬಳು ಅರ್ಜಿ ಸಲ್ಲಿಸಿದಳು.
‘ಯಾರಿಗೆ ರಕ್ತ ಕ್ಯಾನ್ಸರ್ ಅಮ್ಮ, ನಿನ ಗೇನಾ?’ ಎಂದು ಕೇಳಿ ಮರುಗಿದ ಸಿದ್ದ ರಾಮಯ್ಯ, ಮುಖ್ಯಮಂತ್ರಿಗಳ ಪರಿ ಹಾರ ನಿಧಿಯಿಂದ ವೈದ್ಯಕೀಯ ನೆರವು ನೀಡುವುದಾಗಿ ತಿಳಿಸಿ ಅರ್ಜಿಯನ್ನು ತಮ್ಮ ಕಚೇರಿಯ ಅಧಿಕಾರಿಗಳಿಗೆ ನೀಡಿದರು. ಬೆಳವಣಿಗೆ ಕುಂಠಿತಗೊಂಡ ಆರು ವರ್ಷದ ಮಗುವನ್ನು ಹೊತ್ತು ತಂದಿದ್ದ ತಾಯಿ, ‘ನೋಡಿ ನನ್ನ ಮಗುವಿನ ಗತಿ. ನೀವೇ ಇದಕ್ಕೇನಾದರೂ ಪರಿಹಾರ ಸೂಚಿಸಿ’ ಎಂದು ಅಲವತ್ತುಕೊಂಡಳು. ಉಪಚಾರಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಮಿಣಜಗಿಯ ಕಾಶಪ್ಪ ಪೂಜಾರಿ, ಕಂಪ್ಯೂಟರ್ ಆಪರೇಟರ್ ಹುದ್ದೆ ಬೇಡಿದರೆ, ಪಾಪುಮಿಯಾ ಗಂಗನಳ್ಳಿ ಎಂಬುವರು ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಮನವಿ ಮಾಡಿ ಕೊಂಡರು. ಅಗರಖೇಡದ ಜ್ಯೋತಿ ಎಂಬ ಅಂಗವಿಕಲೆ, ‘ಡಿಇಡಿ ತರಬೇತಿ ಹೊಂದಿ ನಾಲ್ಕು ವರ್ಷದಿಂದ ಮನೆ ಯಲ್ಲಿಯೇ ಕುಳಿತಿದ್ದೇನೆ. ನನಗೆ ಶಿಕ್ಷಕಿ ಹುದ್ದೆ ನೀಡಿ’ ಎಂದು ಕಣ್ಣೀರಿಟ್ಟಳು.
ಮುತ್ತಗಿಯ ಬಸಮ್ಮ ಸಜ್ಜನ ಅವರು, ತಮ್ಮ ಹೊಲಕ್ಕೊಂದು ದಾರಿ ಬಿಡಿಸಿ ಕೊಡಿ ಎಂದು ಕೋರಿದರೆ, ಪ್ರಮೋದ ಎಂಬುವರು ನೀಲಕಂಠೇಶ್ವರ ಶಾಲೆಯಲ್ಲಿ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರ ಘೋಷಿಸಿದ್ದ ಒಂದು ಲಕ್ಷ ರೂಪಾಯಿ ಪರಿಹಾರ ಈ ವರೆಗೂ ಬಂದಿಲ್ಲ ಎಂದರು.
ದುಂಡವ್ವ ಅರಕೇರಿ ಎಂಬ ಮಹಿಳೆ ಭೂ ವಿವಾದದಲ್ಲಿ ಗಂಡ ಅಶೋಕನಿಗೆ ಸಾಕ್ಷಿ ಹೇಳದಂತೆ ಒತ್ತಡ ಹಾಕಿ, ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಗಂಡನಿಗೆ ರಕ್ಷಣೆ ನೀಡಿ ಎಂದು ಮನವಿ ಸಲ್ಲಿಸಿದರು. ಅಂಗವಿಕಲ ಮಗನ ಆರೈಕೆಗೆ ವರ್ಗಾವಣೆ ಕೊಡಬೇಕು ಎಂದು ಶಿಕ್ಷಕಿಯೊಬ್ಬರು ಸಲ್ಲಿಸಿದ ಮನವಿಗೆ ಸಿಎಂ ಅಸ್ತು ಎಂದರು.
ಪಿಂಚಣಿ ಸರಿಯಾಗಿ ದೊರೆಯುತ್ತಿಲ್ಲ. ಆಶ್ರಯ ಮನೆ ಹಂಚಿಕೆಯಾಗಿಲ್ಲ, ಪಡಿತರ ದೊರೆಯುತ್ತಿಲ್ಲ ಎಂಬಂತಹ ಬೇಡಿಕೆಗಳೂ ಹೆಚ್ಚಾಗಿದ್ದವು. ಚಿತ್ರಕಲಾ ಶಿಕ್ಷಕರ ನೇಮಕಾತಿ, ಶಾಲಾ–ಕಾಲೇಜು ಗಳಿಗೆ ವೇತನಾನುದಾನ ನೀಡಬೇಕು. ತಮಗೆ ನೌಕರಿ ಕೊಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನೂ ಹಲವರು ಸಲ್ಲಿಸಿದರು.
2008–09ರಲ್ಲಿ ನಡೆದ ಪದವಿ ಕಾಲೇಜುಗಳ ಉಪನ್ಯಾಸಕರ ನೇಮಕ ದಲ್ಲಿ ಅಕ್ರಮವಾಗಿದ್ದು, ಈ ನೇಮಕಾತಿ ರದ್ದುಪಡಿಸಿ ಅರ್ಹರಿಗೆ ಅವಕಾಶ ಕಲ್ಪಿಸ ಬೇಕು ಎಂದು ಸಿಂದಗಿಯ ಡಾ.ಅಂಬಣ್ಣ ಢವಳಾರ ಮನವಿ ಸಲ್ಲಿಸಿದರು. ಅಹವಾಲು ಸಲ್ಲಿಸಲು ಅಂಗವಿಕಲರಿಗೆ ಮೊದಲು ಅಕವಾಶ ಕಲ್ಪಿಸಲಾಗಿತ್ತು.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ವೇತನ ಹೆಚ್ಚಿಸಿ, ಸೇವೆ ಕಾಯಂ ಗೊಳಿಸ ಬೇಕು. ನೇಮಕಾತಿ ಮಾಡಿಕೊಳ್ಳ ಬೇಕು. ಎಲ್ಲ ಇಲಾಖೆಗಳಲ್ಲಿ ಮೀಸ ಲಿರುವ ಶೇ.3ರಷ್ಟು ಅನುದಾನ, ಶಾಸ ಕರು–ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿಯ ಪಾಲು ಸದ್ವಿನಿಯೋಗವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಬಹು ಪಾಲು ಅಂಗವಿಕಲರು ಬೇಡಿಕೆ ಸಲ್ಲಿಸಿದರು.
‘ನನ್ನ ಪತಿ ಜಿಲ್ಲಾ ಪಂಚಾಯಿತಿಯಲ್ಲಿ 28 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರೂ ಅವರ ಸೇವೆ ಕಾಯಂ ಆಗಿಲ್ಲ’ ಎಂದು ಮಹಿಳೆಯೊಬ್ಬರು ದೂರಿದಾಗ ತಕ್ಷಣ ಗಮನ ಹರಿಸುವಂತೆ ಜಿ.ಪಂ. ಸಿಇಒ ಅವರಿಗೆ ಸೂಚಿಸಿದರು. ಗೃಹ ಕಾರ್ಮಿ ಕರಿಗೂ ಸೌಲಭ್ಯ ಕಲ್ಪಿಸಿ ಎಂದು ಆ ಸಂಘಟನೆಯವರು ಕೋರಿದರು.
ಒಂದೂವರೆ ಗಂಟೆ ಜನತಾ ದರ್ಶನ ನಡೆಸಿದ ಮುಖ್ಯಮಂತ್ರಿಗಳು, ಆರಂಭ ದಲ್ಲಿ 45 ನಿಮಿಷ ವೇದಿಕೆಯಲ್ಲಿ ಕುಳಿತು ಶಾಂತಚಿತ್ತರಾಗಿಯೇ ಅಹವಾಲು ಆಲಿಸಿ ದರು. ಕೊನೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಿದ್ದರಿಂದ ತಾವೇ ಅವರ ಬಳಿಗೆ ಹೋಗಿ ಅರ್ಜಿಗಳನ್ನು ಪಡೆದು ಕೊಂಡರು. ಒಟ್ಟಾರೆ 679 ಅರ್ಜಿಗಳು ಸಲ್ಲಿಕೆಯಾದವು.
ಪ್ರತಿಭಟನೆ: ಪೊಲೀಸರು ತಮ್ಮನ್ನು ಜನತಾದರ್ಶನದೊಳಗೆ ಬಿಡಲಿಲ್ಲ ಎಂದು ರೈತ ಸಂಘದವರು ಪ್ರತಿಭಟನೆ ನಡೆಸಿ,ಧಿಕ್ಕಾರದ ಘೋಷಣೆ ಕೂಗಿದರು. ಮುಖ್ಯಮಂತ್ರಿಗಳನ್ನೇ ನಿಮ್ಮ ಬಳಿಗೆ ಕರೆತರುವುದಾಗಿ ಶಾಸಕ ಶಿವಾನಂದ ಪಾಟೀಲ ಭರವಸೆ ನೀಡಿ, ಅವರನ್ನು ಸಮಾಧಾನ ಪಡಿಸಿದರು. ಕೊನೆಗೆ ಮುಖ್ಯಮಂತ್ರಿಗಳು ಬಂದು ಮನವಿ ಸ್ವೀಕರಿಸಿದರು.
‘ಎಲ್ಲ ಮನವಿಗಳನ್ನು ದಾಖಲಿಸಿ ಕೊಂಡು ಆಯಾ ಇಲಾಖೆಗೆ ಕಳಿಸಲಾ ಗುತ್ತಿದೆ. ಅವುಗಳ ವಿಲೇವಾರಿಗೆ ಸಂಬಂಧಿಸಿದ ಮಾಹಿತಿಯನ್ನು ನಿಮಗೆ ನೇರವಾಗಿ ನೀಡಲಾಗುವುದು’ ಎಂದು ಮುಖ್ಯಮಂತ್ರಿಗಳು ಹೇಳಿದರು. ‘ಜನತಾ ದರ್ಶನ ಸ್ಥಳಕ್ಕೆ ಆಗಮಿಸಲು ಪೊಲೀಸ್ರು ಕಿರಿಕಿರಿ ಯನ್ನುಂಟು ಮಾಡಿದರು. ಹರಸಾಹಸ ಮಾಡಿ ಇಲ್ಲಿಗೆ ಬರಬೇಕಾಯಿತು. ಬಡ ವರ ಸಮಸ್ಯೆ ಆಲಿಸಲು ಇಷ್ಟೊಂದು ಆಡಂಬರ–ಭದ್ರತೆಯ ಅವಶ್ಯಕತೆ ಇತ್ತೇ’ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.