ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೌಕರರ ವರ್ಗಾವಣೆಗೆ ಹೊಸ ನೀತಿ’

Last Updated 23 ಸೆಪ್ಟೆಂಬರ್ 2013, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಗಮಗಳ ಮಟ್ಟದಲ್ಲಿ ನೌಕರರ ವರ್ಗಾವಣೆಗೆ ನೀತಿ ರೂಪಿಸಲು ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ವರದಿಯ ನಂತರ ನೌಕರರ ವರ್ಗಾವಣೆಗೆ ಕ್ರಮ ಕೈಗೊಳ್ಳ ಲಾಗುವುದು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಬಿಎಂಟಿಸಿ ನೌಕರರ ಪತ್ತಿನ (ಸಾಲ) ಸಹಕಾರ ಸಂಘದ ವತಿಯಿಂದ ಸೋಮವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ, ಹೊಸ ನೇಮಕಾತಿಯನ್ನು ಆಯಾ ನಿಗಮಗಳಿಗೆ ವಹಿಸಲಾಗುವುದು ಎಂದರು.

‘ನರ್ಮ್‌ ಯೋಜನೆ ಅಡಿಯಲ್ಲಿ ರಾಜ್ಯಕ್ಕೆ 2,000 ನೂತನ ಬಸ್‌ಗಳನ್ನು ಮಂಜೂರಾಗಿದೆ. ಇದನ್ನು ಬಳಸಿಕೊಂಡು ಎಲ್ಲ ಸಾರಿಗೆ ನಿಗಮಗಳು ಉತ್ತಮವಾಗಿ ಕಾರ್ಯನಿರ್ವಹಿಸಲಿವೆ. ನಗರದ ವಿವಿಧ ಭಾಗಗಳಲ್ಲಿ ಏಳು ಸಂಚಾರ ಮತ್ತು ಸಾಗಣೆ ನಿರ್ವಹಣಾ ಕೇಂದ್ರ (ಟಿಟಿಎಂಸಿ)ಗಳನ್ನು ಸ್ಥಾಪಿಸ ಲಾಗು ವುದು. ಕಲಾಸಿಪಾಳ್ಯದಲ್ಲಿ ₨209 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣದ ಸ್ಥಾಪನೆಗೆ ಅನುಮೋದನೆ ನೀಡಲಾಗಿದ್ದು, ಶೀಘ್ರ ಟೆಂಡರ್‌ ಕರೆಯಲಾಗುವುದು ಎಂದು ಹೇಳಿದರು.

ನಗರದ ಬಿಟಿಎಂ ಬಡಾವಣೆಯಲ್ಲಿ ₨60 ಕೋಟಿ ವೆಚ್ಚದಲ್ಲಿ ನೂತನ  ಟಿಟಿಎಂಸಿ ನಿರ್ಮಿಸಲಾಗುವುದು. ನಿಗಮದಲ್ಲಿ ಚಾಲಕರು ಮತ್ತು ನಿರ್ವಾಹಕರ ಸಮಸ್ಯೆಯನ್ನು ನಿವಾರಿಸಲು ಜನವರಿ ಒಳಗೆ 1,500 ಚಾಲಕರು ಮತ್ತು 900 ನಿರ್ವಾಹಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಹಿಳೆಯರ ಸುರಕ್ಷತೆಗೆ ರಾತ್ರಿ ಪಾಳಿಯಲ್ಲಿ ಸಂಚರಿಸುವ 500–600 ಬಸ್‌ಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದರು.

‘ನಾನು ಸಚಿವನಾಗುವ ವೇಳೆಗೆ ನಿಗಮವು 150 ಕೋಟಿ ನಷ್ಟದಲ್ಲಿತ್ತು. ಮುಂದಿನ ಮಾರ್ಚ್‌ ವೇಳೆಗೆ ಸಂಸ್ಥೆಯನ್ನು ಲಾಭದತ್ತ  ಕೊಂಡೊಯ್ಯುವಂತೆ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ಭಾರತೀಯ ಕಂದಾಯ ಸೇವೆ (ಐಆರ್ಎಸ್‌) ಪರೀಕ್ಷೆಯಲ್ಲಿ 658ನೇ ರ್‍ಯಾಂಕ್‌ ಪಡೆದ ಬಿಎಂಟಿಸಿಯ ವಿಭಾಗೀಯ ತಾಂತ್ರಿಕ ನಿಯಂತ್ರಣ ಅಧಿಕಾರಿ ಲಿಂಗರಾಜು ಅವರ ಪುತ್ರಿ ಬಿ.ಎಲ್‌.ಶ್ರುತಿ, ಬಿಎಂಟಿಸಿಯ ನಿವೃತ್ತ ಪ್ರಧಾನ ವ್ಯವಸ್ಥಾಪಕ (ಸಂಚಾರ) ದಸ್ತಗೀರ್‌ ಷರೀಫ್, ಬಿಎಂಟಿಸಿಯ ಪ್ರಧಾನ ವ್ಯವಸ್ಥಾಪಕ (ಸಂಚಾರ) ಜಿ.ಪ್ರಕಾಶ್‌ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಸೇರಿದಂತೆ ವಿವಿಧ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ 400ಮಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT