ಬ್ರಹ್ಮಾವರ: ‘ತುಳುಭಾಷೆ ಮತ್ತು ಭಾರತೀಯ ಭಾಷೆಗಳಿಗೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ. ಭಾವನೆಯ ಸಂಕೇತವಾಗಿರುವ ಭಾಷೆಯ ಮೂಲಕ ನಮ್ಮ ಸಂಸ್ಕೃತಿಯೂ ಉಳಿಯುತ್ತದೆ’ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಬಾರ್ಕೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಜಯ ಸಂಭ್ರಮ ಬೆಳ್ಳಿ ಪರ್ಬೊದ ನೆಂಪುಡು ನಡೆಯುವ ತುಳುಜಾತ್ರೆಯ ರಥಯಾತ್ರೆಗೆ ಸೋಮವಾರ ಚಾಲನೆ ನೀಡಿದ ಬಳಿಕ ಕಲ್ಲುಚಪ್ಪರದ ಬಳಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ‘ರಾಷ್ಟ್ರಾಭಿಮಾನದೊಂದಿಗೆ ಭಾಷಾಭಿಮಾನವೂ ನಮ್ಮಲ್ಲಿ ಇರಬೇಕು. ಭಾಷೆ, ಸಂಸ್ಕೃತಿ ನಿರಂತರವಾಗಿ ಹರಿಯುವ ನೀರಿನಂತಿರಬೇಕು’ ಎಂದರು.
ತುಳುನಾಡಿನ ರಾಜಧಾನಿ ಎಂದೆನಿಸಿದ ಬಾರ್ಕೂರಿನಲ್ಲಿ ಈ ಬಡಕ್ಕಯಿ ತೇರ್ಗೆ ಚಾಲನೆ ದೊರೆತದ್ದು ನಿಜಕ್ಕೂ ವಿಶೇಷ ಎಂದು ಅವರು ಹೇಳಿದರು. ರಾಜ್ಯೋತ್ಸವ ಪುರಸ್ಕೃತ ಬಾರ್ಕೂರಿನ ಬಿ.ಶಾಂತರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಅಜಿತ್ ಕುಮಾರ್ ರೈ ಮಾಲಾಡಿ, ಟಿ.ತಾರಾನಾಥ ಕೊಟ್ಟಾರಿ, ಹರಿಪ್ರಸಾದ್ ರೈ ಬೆಳ್ಳಿಪಾಡಿ, ಬಿ.ಶ್ರೀನಿವಾಸ ಶೆಟ್ಟಿಗಾರ್, ಭೋಜರಾಜ್ ಶೆಟ್ಟಿ, ಎಂ.ವೆಂಕಟರಮಣ ಭಂಡಾರ್ಕಾರ್್, ನೀಲಾವರ ಮಹಿಷಮರ್ಧಿನಿ ದೇವಸ್ಥಾನದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಕೂಡ್ಲಿ ಸತ್ಯನಾರಾಯಣ ಉಡುಪ, ಉದಯ-ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.